ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಯಲ್ಲಿ ಸಲೂನ್ ಇಟ್ಟುಕೊಂಡು ನಿಷ್ಠೆಯಿಂದ ತನ್ನ ಕಾಯಕ ನಡೆಸುತ್ತಿರುವ ಮುತ್ತಣ್ಣ ಹಡಪದಗೆ `ಕಾಯಕ ರತ್ನ’ ಪ್ರಶಸ್ತಿ ದೊರಕಿದೆ.
ಕರ್ನಾಟಕ ಸರಕಾರ ಮತ್ತು ಗದಗ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿಜಸುಖಿ ಹಡಪದ ಶ್ರೀ ಅಪ್ಪಣ್ಣನವರ ಆದರ್ಶಗಳನ್ನು ಅಳವಡಿಸಿಕೊಂಡು ನಿಷ್ಠೆ ಮತ್ತು ಬದ್ಧತೆಯಿಂದ, ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವಾ ಮನೋಭಾವದಿಂದ ಕುಲ ಕಾಯಕವ ಮಾಡುತ್ತಿರುವುದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಮುತ್ತು ಹಡಪದ ಅನೇಕ ಸಾಂಸ್ಕೃತಿಕ ಕಾರ್ಯಗಳಲ್ಲಿ ನಿರೂಪಣೆ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. 1998ರಲ್ಲಿ ಹಡಪದ ಅಪ್ಪಣ್ಣ ಸಮಾಜದ ನರೇಗಲ್ಲನ ಸದಸ್ಯರಾಗಿ ತಮ್ಮ ಸೇವೆ ಪ್ರಾರಂಭಿಸಿ, 2016ರಲ್ಲಿ ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದರು. 2018ರಿಂದ ಗಜೇಂದ್ರಗಡ ತಾಲೂಕಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಈಗಾಗಲೇ 8 ಬಾರಿ ರಕ್ತದಾನ ಮಾಡಿ ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರೆಸಿದ್ದಾರೆ. ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕೆ ಮುತ್ತು ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಅವರಿಗೆ ಶುಭ ಹಾರೈಸಿದ್ದಾರೆ.