ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರಿನಲ್ಲಿ ಐಪಿಎಲ್ ಮಾದರಿಯಲ್ಲಿ ರಾಜ್ಯಮಟ್ಟದ ಸಾಫ್ಟ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು, ಜಿಲ್ಲೆಯ ಗದಗ ಪಾವರ್ಸ್ ತಂಡ ನ. 24ರಂದು ಮೊದಲ ಲೀಗ್ ಪಂದ್ಯ ಆಡಲಿದೆ ಎಂದು ತಂಡದ ಒಡತಿ ಶ್ವೇತಾ ಗೌಡ ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಈ ಟೂರ್ನಮೆಂಟ್ ಆಯೋಜಿಸಿದೆ. ಗಂಗಾಧರ ರಾಜು ಅವರ ಕನಸಿನ ಟೂರ್ನಮೆಂಟ್ ಇದಾಗಿದ್ದು, ಮುಂಬರುವ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಫ್ಟ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲು ಅಸೋಸಿಯೇಶನ್ ಮುಂದಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ತಂಡ ಸೇರಿದಂತೆ ಒಟ್ಟು ೩೨ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಟೂರ್ನಿಯ ವಿಜೇತ ತಂಡಕ್ಕೆ ಗರಿಷ್ಠ 25 ಲಕ್ಷ ರೂ. ಬಹುಮಾನ ಘೋಷಣೆಯಾಗಿದೆ. ಆದ್ದರಿಂದ, ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿಭಾವಂತರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಎಂ. ಸಯ್ಯದ, ಶಿವು ಕರಡಿ, ಕಾವೇರಿ ಬಡಿಗೇರ, ಮಹೇಶ್ವರಾನಂದ ಗುರುಜಿ, ಸಯ್ಯದ ಕೊಪ್ಪಳ, ಶ್ರೀಧರ ವಜ್ರಬಂಡಿ, ಶ್ರೀಕಾಂತ ಪೆರೂರ, ರವಿ, ಸರ್ಫರಾಜ ಕೌತಾಳ, ಶಂಕರ ಗೌಡಕಿ, ರಮೇಶ ಬೆನಹಾಳ, ವೀರೇಶ ವಡ್ಡರ್, ವಿಜಯ ಮುಳಗುಂದ ಮುಂತಾದವರು ಉಪಸ್ಥಿತರಿದ್ದರು.