ಗದಗ:- ಹಾಡುಹಗಲೇ ವ್ಯಕ್ತಿಗಳಿಬ್ಬರು ನಡುಬೀದಿಯಲ್ಲಿ ಚಾಕು ಸಮೇತ ಹೊಡೆದಾಟ ನಡೆಸಿರುವ ಘಟನೆ ಗದಗ ನಗರದ ಚೆನ್ನಮ್ಮ ಸರ್ಕಲ್ ಬಳಿ ಜರುಗಿದೆ.
ಘಟನೆಯಿಂದ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಚಾಕುವಿನಿಂದ ಇರಿದು ಮಾರಾಮಾರಿ ನಡೆದಿದೆ. ಫಕೀರೇಶ ನಂದಿಹಳ್ಳಿ ಹಾಗೂ ಗಂಗಾಧರ ಎಂಬುವವರ ನಡುವೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ.
ಗದಗ ನಗರದ ಹುಡ್ಕೋ ಕಾಲೋನಿಯಲ್ಲಿ ಇಬ್ಬರು ವ್ಯಕ್ತಿಗಳು ವಾಸವಾಗಿದ್ದಾರೆ. ಇವರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಒಬ್ಬರನೊಬ್ಬರು ರಸ್ತೆಯಲ್ಲೇ ಬಡಿದಾಟ ನಡೆಸಿದ್ದಾರೆ. ಗಲಾಟೆಯಲ್ಲಿ ಫಕೀರೇಶಗೆ ಗಂಗಾಧರ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ.
ಪೊಲೀಸರ ಯಾವುದೇ ಭಯವೇ ಇಲ್ದೆ ಇಬ್ಬರು ಹೊಡೆದಾಟ ನಡೆಸಿದ್ದಾರೆ. ಹೊಡೆದಾಟದ ಲೈವ್ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಘಟನೆಯಿಂದ ಫಕೀರೇಶನಿಗೆ ಗಂಭೀರ ಗಾಯವಾಗಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಸಂಬಂಧ ಆರೋಪಿ ಗಂಗಾಧರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.