ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನಲ್ಲಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅಮ್ಮನವರ ಸೂಚನೆಯಂತೆ ನೊಂದವರ ಬಾಳಿನ ಆಶಾಕಿರಣದ ಸಲುವಾಗಿ ವಾತ್ಸಲ್ಯ ಕಾರ್ಯಕ್ರಮದ ಮೂಲಕ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಶಿರಹಟ್ಟಿ/ಲಕ್ಮೇಶ್ವರ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಪುನೀತ್ ಓಲೇಕಾರ ಹೇಳಿದರು.
ಅವರು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ಗಳನ್ನು ವಿತರಿಸಿ ಮಾತನಾಡಿದರು.
ಸಂಸ್ಥೆಯ ವತಿಯಿಂದ ನೀಡಿರುವ ಕಿಟ್ನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ನಿತ್ಯ ಜೀವನ ನಿರ್ವಹಣೆಗೆ ಅಗತ್ಯವಿರುವ ಪಾತ್ರೆ, ಚಾಪೆ ಬಟ್ಟೆಗಳನ್ನೊಳಗೊಂಡ ಕಿಟ್ಗಳನ್ನು ವಿತರಿಸಲಾಗಿದೆ. ಜೊತೆಗೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಫಲಾನುಭವಿಗಳಿಗೆ ಆಹಾರ ಜೀರ್ಣಶಕ್ತಿ ಕಡಿಮೆಯಾಗಿರುವುದನ್ನು ಗಮನಿಸಿ ಪ್ರತಿ ತಿಂಗಳು ಅಂತವರಿಗೆ ಅಕ್ಕಿ, ಗೋಧಿ, ರಾಗಿ ಮತ್ತು ಹೆಸರು ಕಾಳು ಮಿಶ್ರಿತ ಸಿರಿ ವಾತ್ಸಲ್ಯ ಕಿಟ್ಗಳನ್ನು ವಿತರಿಸಿ ಪ್ರತಿನಿತ್ಯ ಸೇವನೆ ಮಾಡಲು ಸಲಹೆ ನೀಡಲಾಗಿದೆ. ವಾತ್ಸಲ್ಯ ಕಾರ್ಯಕ್ರಮದಡಿ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ನಿರ್ಗತಿಕರು, ಅಸಹಾಯಕರು, ಗಂಭೀರ ಅನಾರೋಗ್ಯ ಪೀಡಿತರಿಗೆ ಪ್ರತಿ ತಿಂಗಳು 1 ಸಾವಿರದಂತೆ 34 ಜನ ಅಶಕ್ತರಿಗೆ ಮಾಸಾಶನ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೆಳ್ಳಟ್ಟಿ ಗ್ರಾ.ಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ತಾಲೂಕು ಸಮನ್ವಯಾಧಿಕಾರಿ ಮಮತಾ, ವಲಯ ಮೇಲ್ವಿಚಾರಕ ಗಂಗಾಧರ ಪಾಮರೆಡ್ಡಿ, ಶಾಂತಾ ಬೆನಕೊಪ್ಪ, ಗಂಗೋತ್ರಿ ಗೌಡ, ಮಹಾದೇವಿ ಕಿಗ್ಗಣ್ಣವರ, ಶ್ರೀನಿವಾಸ ಪತ್ತಾರ, ಪುಷ್ಪಾ ಹಿರೇಮಠ, ದಾವಲಬಿ ಚಿಂಚಲಿ ಮುಂತಾದವರು ಉಪಸ್ಥಿತರಿದ್ದರು.