ಮಂಡ್ಯ:- ಸೈಬರ್ ಚೋರರ ಚಿತ್ತ ಈಗ ಮಂಡ್ಯ ಜಿಲ್ಲೆಯತ್ತ ನೆಟ್ಟಿದೆ. ಹೌದು, ಸಕ್ಕರೆನಾಡು ಮಂಡ್ಯದ KR ಪೇಟೆಯಲ್ಲಿ ಸೈಬರ್ ಕಳ್ಳರ ಹಾವಳಿ ಮಿತಿ ಮೀರಿದ್ದು, ಅಂಗಡಿ ಮಾಲೀಕರನ್ನೇ ಟಾರ್ಗೆಟ್ ಮಾಡಿ ಹಣಕ್ಕೆ ಸೈಬರ್ ವಂಚಕರು ಟಾರ್ಚರ್ ಕೊಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಪುರಸಭೆಯ ಹೆಸರಲ್ಲಿ ಅಂಗಡಿ ಮಾಲೀಕರಿಗೆ ಟ್ರೇಡ್ ಲೈಸನ್ಸ್ ನವೀಕರಿಸುವಂತೆ ಪೋನ್ ಮೂಲಕ ಟಾರ್ಚರ್ ಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ಅಂಗಡಿ ಮಾಲೀಕರಿಗೆ ಕ್ಯೂಆರ್ ಕೋಡ್ ಕಳಿಸಿ ಸ್ಕ್ಯಾನ್ ಮೂಲಕ ಹಣ ಪಾವತಿಗೆ ಒತ್ತಾಯ ಮಾಡಿದ್ದಾರೆ. ಒಂದು ವೇಳೆ ಹಣ ಪಾವತಿಸದಿದ್ದರೆ ಲಾಯರ್ ನೋಟೀಸ್ ಕಳಿಸುವ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೇ ಪದೇ ಪದೇ ಕರೆ ಮಾಡಿ ಅಂಗಡಿ ಮಾಲೀಕರಿಗೆ ಸೈಬರ್ ವಂಚಕರು ಟಾರ್ಚರ್ ಕೊಡುತ್ತಿದ್ದಾರೆ.
ಇದರಿಂದ ಗಾಬರಿಗೊಂಡ ಅಂಗಡಿ ಮಾಲೀಕರು, ಪುರಸಭೆಗೆ ಬಂದು ವಿಚಾರಿಸಿದಾಗ ಸೈಬರ್ ವಂಚಕರ ಜಾಲ ಬಯಲಾಗಿದೆ. ಘಟನೆಯಿಂದ ಎಚ್ಚೆತ್ತ ಪುರಸಭೆ ಅಧಿಕಾರಿಗಳಿಂದ ಪಟ್ಟಣ ಪೊಲೀಸರಿಗೆ ಸೈಬರ್ ವಂಚಕರ ವಿರುದ್ದ ದೂರು ನೀಡಲಾಗಿದೆ. ಅಲ್ಲದೇ ಪಟ್ಟಣದ ವ್ಯಾಪ್ತಿಯ ಅಂಗಡಿ ಮಾಲೀಕರು, ಅಪರಿಚಿತರು ಕಳಿಸುವ QR ಕೋಡ್ ಗೆ ಸ್ಕ್ಯಾನ್ ಮಾಡಿ ಹಣ ಕಳಿಸದಂತೆ ಪುರಸಭೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸಕ್ರಿಯವಾಗಿರುವ ಸೈಬರ್ ವಂಚಕರ ವಿರುದ್ದ ಜಾಗೃತಿ ವಹಿಸುವಂತೆ ಅಧಿಕಾರಿ ಮತ್ತು ಪುರಸಭೆ ಸದಸ್ಯರಿಂದ ಸಾರ್ವಜನಿಕರಿಗೆ ಕರೆ ಕೊಡಲಾಗಿದ್ದು, ನಮ್ಮಿಂದ ಅಂಗಡಿ ಮಾಲೀಕರಿಗೆ ಯಾವುದೇ ಸಂದೇಶ QR ಕೋಡ್ ಕಳಿಸಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಸ್ಪಷ್ಟನೆ ಕೊಟ್ಟಿದ್ದಾರೆ.