ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಜಕ್ಕಲಿ ಗ್ರಾಮದ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಈಗ ದಿ. ಅಂದಾನಪ್ಪ ದೊಡ್ಡಮೇಟಿಯವರ ಸ್ಮಾರಕ ಭವನ ನಿರ್ಮಾಣದಿಂದ ಇತಿಹಾಸದ ಪುಟ ಸೇರಲಿದೆ ಎಂದು ರಾಜ್ಯ ಖನಿಜ ಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಜಕ್ಕಲಿ ಗ್ರಾಮದಲ್ಲಿ 35 ಲಕ್ಷ ರೂ.ಗಳ ಅಭಿವೃದ್ಧಿ ಕಾರ್ಯ, ವಿವೇಕ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಎರಡು ಶಾಲಾ ಕೊಠಡಿ ಹಾಗೂ ಬಿಸಿಊಟ ಕೋಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ, ನಾಡಿಗೆ ದಿ. ಅಂದಾನಪ್ಪ ದೊಡ್ಡಮೇಟಿಯವರ ಕೊಡುಗೆ ಅನನ್ಯವಾಗಿದೆ. ಅವರ ಹೋರಾಟ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮುಂದಿನ ಪೀಳಿಗೆಗೆ ಜಕ್ಕಲಿ ಗ್ರಾಮದ ಇತಿಹಾಸವನ್ನು ಸಾರುವ ದೃಷ್ಟಿಯಿಂದ ಎರಡು ಎಕರೆ ಪ್ರದೇಶದಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಮಾರಕ ಭವನವನ್ನು ನಿರ್ಮಿಸಲು ಈಗಾಗಲೇ ಕಾರ್ಯ ನಡೆದಿದ್ದು, ಸರಕಾರ ಮೊದಲ ಹಂತದಲ್ಲಿ 3 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ ಎಂದರು.
ಸ್ಮಾರಕ ಭವನ ನಿರ್ಮಾಣದಿಂದ ಜಕ್ಕಲಿ ಗ್ರಾಮ ಮತ್ತಷ್ಟು ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವಿಲ್ಲ. ಕಾರಣ, ಅದೊಂದು ಪ್ರವಾಸಿ ತಾಣವಾಗಲಿದ್ದು, ಇದರಿಂದ ಗ್ರಾಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಅನುದಾನವನ್ನು ನೀಡಲಾಗುವುದು. ಮುಖ್ಯವಾಗಿ ಗ್ರಾಮಸ್ಥರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಸಂಗನಗೌಡ ಪಾಟೀಲ, ಮಲ್ಲಣ್ಣ ಮೇಟಿ, ರಮೇಶ ಪಲ್ಲೇದ, ಯೂಸುಫ್ ಇಟಗಿ, ಬಸವರಾಜ ನವಲಗುಂದ, ರಾಜು ಮುಗುಳಿ, ಮುತ್ತು ಮೇಟಿ, ಅಂದಾನೇಶ ದೊಡ್ಡಮೇಟಿ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು ಅಧಿಕಾರಿಗಳು, ಗ್ರಾಮಸ್ಥರಿದ್ದರು.