ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ರೋಣ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಕೆ. ಕೇಸರಿ ಮಾತನಾಡಿ, ಶರಣ ಮಡಿವಾಳ ಮಾಚಿದೇವರ ಕಾಲ 1120ರಿಂದ 1130. ಸಿಂದಗಿ ತಾಲೂಕಿನ ದೇವರ ಹಿಪ್ಪರಿಗಿಯಲ್ಲಿ ಪರುವಯು ಸುಜ್ಞಾನವ ಈ ದಂಪತಿಗಳ ಮಗನಾಗಿ ಜನಿಸಿದರು. ಇವರೊಬ್ಬ ಅವತಾರ ಪುರುಷ. ಶರಣರ ವಸ್ತುಗಳನ್ನು ಮಡಿ ಮಾಡುವುದು ಇವರ ಕಾಯಕ. 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು, ಮೂಢನಂಬಿಕೆಗಳ ಬಗ್ಗೆ ಸಮಾಜದಲ್ಲಿ ಜನರನ್ನು ತಿದ್ದುವ ಕೆಲಸವನ್ನು ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಿ.ವಿ. ದೇಸಾಯಿಪಟ್ಟಿ, ಯಲ್ಲಪ್ಪಗೌಡ ಭರಮಗೌಡ್ರು. ವೀರೇಶ ಮಡಿವಾಳರ, ಮಂಜುನಾಥ ಮಡಿವಾಳ, ಅಂದಪ್ಪ ಮಡಿವಾಳರ, ಶಿವರೆಡ್ಡಿಪ್ಪ ಕರಮಡಿ, ಮುತ್ತಪ್ಪ ಚಿಗರಿ, ಶಾಲಾ ಸಿಬ್ಬಂದಿಯವರು ಮಕ್ಕಳು ಭಾಗವಹಿಸಿದ್ದರು.
ನರೇಗಲ್ಲ ಕೆಜಿಎಸ್ ಶಾಲೆಯಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಬಸವರಾಜ ಕುರಿ ಮಾತನಾಡಿ, ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ಮಡಿ ಹಾಸಿ ಸ್ವಾಗತಿಸುವ ಕೆಲಸ ಅವರದ್ದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಮಹಾ ಘನತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಎನ್.ಎಲ್. ಚೌವಾಣ, ಎಸ್.ಐ. ಜಗಾಪುರ, ಎಂ.ಪಿ. ಅಣಗೌಡರ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ್, ಎಂ.ಎಸ್. ಮಾಳಶೆಟ್ಟಿ, ರಾಜೇಶ್ವರಿ ತೊಂಡಿಹಾಳ, ಸಿಂಧು ಗುಡಿಸಾಗರ ಇದ್ದರು.