ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ದತ್ತಾತ್ರೇಯ ದೇವಸ್ಥಾನದ ಶ್ರೀ ಗುರು ಪ್ರತಿಪದೆ ಉತ್ಸವವು ಫೆ. 2ರಿಂದ ಫೆ. 14ರವರೆಗೆ ನಡೆಯಲಿದೆ ಎಂದು ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದ ಈ ಉತ್ಸವದಲ್ಲಿ ಫೆ. 2ರಿಂದ ಫೆ. 14ರವರೆಗೆ ನಿತ್ಯ ಬೆಳಿಗ್ಗೆ 7.30ಕ್ಕೆ ಶ್ರೀದೇವರಿಗೆ ಲಘು ರುದ್ರಾಭಿಷೇಕ, ಸಾಯಂಕಾಲ 7ಕ್ಕೆ ಪಾಲಕೀ ಸೇವೆ ಜರುಗುವುದು. ಫೆ. 7ರಿಂದ 13ರವರೆಗೆ ನಿತ್ಯ ಮುಂಜಾನೆ 9ಕ್ಕೆ ಮಾರನಬಸರಿಯ ವೇ. ಮೂ. ವಿಶ್ವನಾಥಭಟ್ಟ ವೈದ್ಯ ಇವರಿಂದ ಶ್ರೀ ಗುರು ಚರಿತ್ರೆ ಪಾರಾಯಣ ನಡೆಯಲಿದೆ. ಫೆ. 9ರಂದು ಬೆಳಿಗ್ಗೆ 6ಕ್ಕೆ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ತೊಟ್ಟಿಲೋತ್ಸವ ಜರುಗಲಿದೆ. ಫೆ. 10ರಂದು ಸಂಜೆ 5.30ಕ್ಕೆ ನರೇಗಲ್ಲದ ರಾಜಶ್ರೀ ಕುಲಕರ್ಣಿಯವರಿಂದ, ಫೆ. 11ರಂದು ಸಂಜೆ 5.30ಕ್ಕೆ ಕೋಟುಮಚಗಿಯ ಗಾಯತ್ರಿ ಕುಲಕರ್ಣಿಯವರಿಂದ ಮತ್ತು ಫೆ. 12ರಂದು ಸಂಜೆ 5. 30ಕ್ಕೆ ಆಕಾಶವಾಣಿ, ದೂರದರ್ಶನ ಕಲಾವಿದ ಡಾ. ವೆಂಕಟೇಶ ಕುಲಕರ್ಣಿಯವರಿಂದ ಸಂಗೀತ ಸೇವೆ ಜರುಗಲಿವೆ.
ಫೆ. 12ರಂದು ಬೆಳಿಗ್ಗೆ 8ಕ್ಕೆ ಅರುಣ ಗುರುನಾಥ ಕುಲಕರ್ಣಿಯವರಿಂದ ಕ್ಷೀರಾಭಿಷೇಕ, ರಾಜಣ್ಣ ಸದರಜೋಷಿಯವರಿಂದ ಬುತ್ತಿ ಪೂಜೆ, ಮ. 1ಕ್ಕೆ ಮಧುಕರಿ ಜರುಗಲಿದೆ. ಫೆ.13ರ ಬೆಳಿಗ್ಗೆ 8ಕ್ಕೆ ನರೇಗಲ್ಲದ ಡಾ. ಶರತ್ ಕಾಳೆಯವರಿಂದ ಲಘುರುದ್ರ ಸ್ವಾಹಾಕಾರ, 10ಕ್ಕೆ ಶ್ರೀ ಗುರು ಚರಿತ್ರೆ ಮುಕ್ತಾಯ, ಸಂಜೆ 6ಕ್ಕೆ ಜಗದ್ಗುರು ಶಂಕರಾಚಾರ್ಯರನ್ನು ಕುರಿತು ನಿವೃತ್ತ ಶಿಕ್ಷಕ ರಾಮಚಂದ್ರ ಮೋನೆಯವರಿಂದ ಮತ್ತು ಉಪನ್ಯಾಸಕ ಡಾ. ದತ್ತಪ್ರಸನ್ನ ಪಾಟೀಲರಿಂದ ಶ್ರೀ ಗುರು ದತ್ತಾತ್ರೇಯನನ್ನು ಕುರಿತು ವಿಶೇಷ ಉಪನ್ಯಾಸವಿದೆ. ಡಾ. ಗಜಾನನ ಕಾಳೆ ಅತಿಥಿಗಳಾಗಿ ಆಗಮಿಸುವರು.
ಫೆ. 14ರಂದು ಬೆ. 8ಕ್ಕೆ ಶ್ರೀ ಸತ್ಯ ದತ್ತ ವೃತ, 10ಕ್ಕೆ ನಿವೃತ್ತರಿಗೆ ಮತ್ತು ಪ್ರತಿಭಾವಂತರಿಗೆ ಸನ್ಮಾನ ಜರುಗಲಿದೆ. ಎಸ್.ಎಚ್. ಜೋಷಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮ. 12ಕ್ಕೆ ಕೀರ್ತನ ಕೇಸರಿ ವೇ. ಮೂ. ದಿಗಂಬರ ಶಾಸ್ತ್ರಿಗಳು ಕುರ್ತಕೋಟಿಯವರಿಂದ ಗೋಪಾಲ ಕಾವಲಿ ನಿಮಿತ್ತ ಕೀರ್ತನೆ ಜರುಗಲಿದೆ. ಮ. 1ಕ್ಕೆ ಜರುಗುವ ಗೋಪಾಳ ಕಾವಲಿಯೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.