ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶದಲ್ಲಿ ಕಳೆದ 60 ವರ್ಷಗಳಿಂದ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ ಮಾಡುತ್ತಿದೆ ಎಂದು ವಿ.ಹಿಂ.ಪ ಧಾರ್ಮಿಕ ಪುಂಜದ ಕ್ಷೇತ್ರೀಯ ಪ್ರಮುಖ ಬಸವರಾಜ ಜಿ ಹೇಳಿದರು.
ಅವರು ರವಿವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷದ್ ಲಕ್ಷ್ಮೇಶ್ವರ ಪ್ರಖಂಡದಿಂದ ಧರ್ಮ ರಕ್ಷಾನಿಧಿ ಸಮರ್ಪಣೆ ಹಾಗೂ ಮಹಾ ಕುಂಭಮೇಳ ದರ್ಶನಾರ್ಥಿ ಬಂಧುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು.
ಗಂಗಾ, ಯಮುನಾ, ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮವೇ ಪ್ರಯಾಗರಾಜ. 144 ವರ್ಷಕೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಶ್ರೀಮಂತ, ಬಡವ, ಜಾತಿಯ ಭೇದ ಭಾವವಿಲ್ಲದೆ, ನಾವೆಲ್ಲರೂ ಹಿಂದೂಗಳು ಒಂದು ಎಂಬ ಭಾವದಿಂದ ಪವಿತ್ರ ಸ್ನಾನ ಮಾಡಿದ್ದಾರೆ. ಹಿಂದೂಗಳಲ್ಲಿ ಒಗ್ಗಟಿನ ಕೊರತೆ ಕಾಡುತ್ತಿದ್ದು, ಎಲ್ಲರೂ ಒಂದು ಎಂದು ಬಾಳಬೇಕಾಗಿದೆ. ಪ್ರತಿಯೊಬ್ಬ ಹಿಂದೂ ತಾನು ದುಡಿದ ದುಡ್ಡಿನಲ್ಲಿ ಸ್ವಲ್ಪವಾದರೂ ಹಿಂದೂ ಧರ್ಮ ರಕ್ಷಣೆಗೆ ಸಮರ್ಪಣೆ ಮಾಡಬೇಕು. ಅನ್ಯ ಧರ್ಮೀಯ ಯುವಕರು ಪ್ರೀತಿ ಹೆಸರಲ್ಲಿ ಹಿಂದೂ ಧರ್ಮದ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದು, ಅದನ್ನು ತಡೆಯುವ ಕೆಲಸ ವಿಹಿಂಪ ಮಾಡುತ್ತಿದೆ ಎಂದು ಹೇಳಿದರು.
ವಿಹಿಂಪ ಜಿಲ್ಲಾ ಉಪಾಧ್ಯಕ್ಷೆ ರಾಣಿ ಚಂದಾವರಿ ಮಾತನಾಡಿ, ಹೆಣ್ಣುಮಕ್ಕಳು ಹಿಂದೂ ಧರ್ಮ ರಕ್ಷಣೆಗೆ ಸನ್ನದ್ಧರಾಗಿರಬೇಕು. ಯುವತಿಯರು ಅನ್ಯ ಧರ್ಮೀಯ ಯುವಕರ ಪ್ರೀತಿಯ ಮೊಸದ ಜಾಲಕ್ಕೆ ಬೀಳದಿರಿ ಎಂದು ಹೇಳಿದರು.
ವಿ.ಹಿಂ.ಪ ಪ್ರಖಂಡ ಪಾಲಕ ಪ್ರೊ. ಯಶವಂತರಾವ್ ಕಾಂಬಳೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವೇಶ ಮಹಾಂತಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪಟ್ಟಣದ 300ಕ್ಕೂ ಹೆಚ್ಚು ಮಹಾಕುಂಭಮೇಳ ದರ್ಶನಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಾಗೂ ಧರ್ಮರಕ್ಷಾ ನಿಧಿ ಸಮರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಪವಾರ, ಜ್ಞಾನೋಬಾ ಬೋಮಲೆ, ಮಲ್ಲನಗೌಡ ಪಾಟೀಲ್, ವಿನಯ ಪಾಟೀಲ್, ರಾಜು ಗುಡಗೇರಿ, ರಾಘವೇಂದ್ರ ಪೂಜಾರ, ಶಿವಣ್ಣ ಗಿಡಿಬಿಡಿ, ಎಮ್.ಎಮ್. ಖಂಡೋಜಿ, ಪ್ರಕಾಶ ಮೇವುಂಡಿ, ಎನ್.ಎಮ್. ಬಾಡಗಿ, ಎನ್.ಆರ್. ಇನಾಮತಿ, ಶಿವಪ್ಪ ಡಂಬಳ, ಸುನೀಲ ಮೆಡ್ಲೆರಿ ಇದ್ದರು. ತಾಲೂಕಾಧ್ಯಕ್ಷ ಬಸವರಾಜ ಅರಳಿ ಸ್ವಾಗತಿಸಿದರು, ರವಿ ಲಿಂಗಶೆಟ್ಟಿ ನಿರೂಪಿಸಿದರು. ಚಿಕ್ಕಣ್ಣ ಪೂಜಾರ ವಂದಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಲಕ್ಷ್ಮೇಶ್ವರ ಕರೆವಡಿಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ, ಹಿಂದೂಗಳು ಮಕ್ಕಳಲ್ಲಿ ಉತ್ತಮ ಶಿಕ್ಷಣವನ್ನು, ಕೊಡಿಸುವದರ ಜೊತೆಗೆ ಸಂಸ್ಕಾರ ಬೆಳೆಸಬೇಕು ಎಂದರು.