ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಪಟ್ಟಣದ ಶ್ರೀ ಅನ್ನದಾನೇಶ್ವರ ಕಾಲೊನಿಯ ನಿವಾಸಿಗಳಿಗೆ ತಲೆನೋವಾಗಿದ್ದ ಬೀದಿ ನಾಯಿ ಹಾಗೂ ಅದರ ಮರಿಯನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಸೆರೆ ಹಿಡಿದು ಕೊಂಡೊಯ್ದ ಹಿನ್ನೆಲೆಯಲ್ಲಿ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಶ್ರೀ ಅನ್ನದಾನೇಶ್ವರ ಕಾಲೊನಿಯ ಎರಡನೇ ಅಡ್ಡರಸ್ತೆಯಲ್ಲಿ ಅಲೆದಾಡುತ್ತಿದ್ದ ಬೀದಿ ನಾಯಿ ಮತ್ತು ಅದರ ಮರಿ ಹಗಲು-ರಾತ್ರಿ ಎನ್ನದೆ ಬೊಗಳುತ್ತಿದ್ದು, ಸ್ಥಳೀಯರ ನಿದ್ದೆ ಮತ್ತು ನೆಮ್ಮದಿಯನ್ನು ಕದಡಿತ್ತು. ರಾತ್ರಿ ಪೂರ್ತಿ ಎಚ್ಚರದಿಂದ ಕಾಲ ಕಳೆಯಬೇಕಾದ ಪರಿಸ್ಥಿತಿ ನಿವಾಸಿಗಳದ್ದಾಗಿತ್ತು. ಇದರಿಂದ ನಿವಾಸಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಿತ್ತು ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದರು.
ಇದಲ್ಲದೆ ಮರಿ ನಾಯಿ ಮನೆಗಳಿಗೆ ನುಗ್ಗಿ ಎಲ್ಲೆಂದರಲ್ಲಿ ಹೊಲಸು ಮಾಡುತ್ತಿದ್ದು, ಅದನ್ನು ಸ್ವಚ್ಛಗೊಳಿಸುವುದೇ ನಿವಾಸಿಗಳಿಗೆ ದೊಡ್ಡ ತೊಂದರೆಯಾಗಿತ್ತು.
ಈ ಕುರಿತು ನಿವಾಸಿಗಳು ಕಳೆದ ತಿಂಗಳೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಗಮನಕ್ಕೆ ತಂದಿದ್ದು, ಬುಧವಾರ ಪಪಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೀದಿ ನಾಯಿ ಮತ್ತು ಅದರ ಮರಿಯನ್ನು ಸೆರೆ ಹಿಡಿದರು.
ಈ ಹಿನ್ನೆಲೆಯಲ್ಲಿ ನಿವಾಸಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.



