ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬೆಳೆ ವಿಮಾ ಪರಿಹಾರದಲ್ಲಿ ಆಗುತ್ತಿರುವ ತಾರತಮ್ಯ, ಕಳಪೆ ಪೈಪ್, ಔಷಧಿ ವಿತರಿಸುತ್ತಿರುವುದು, ಸಮರ್ಪಕ ಮಾಹಿತಿ ನೀಡದೇ ಇರುವುದಕ್ಕೆ ಬುಧವಾರ ರೈತ ಸಂಘಟನೆಯ ಪದಾಧಿಕಾರಿಗಳು ಶಿರಹಟ್ಟಿಯ ಕೃಷಿ ಇಲಾಖೆಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಶಿರಹಟ್ಟಿಯಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕಳಪೆ ಬೀಜ ಮತ್ತು ಕಳಪೆ ಕೃಷಿ ಪರಿಕರಗಳನ್ನು ಪೂರೈಸುತ್ತಿರುವದರ ಬಗ್ಗೆ ಅನೇಕ ದೂರುಗಳು ಬಂದಿದ್ದು, ಇಲ್ಲಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿಯನ್ನು ಕೇಳಿದರೂ ಸರಿಯಾಗಿ ನೀಡುತ್ತಿಲ್ಲ. ಇದೀಗ ಹೋರಾಟಕ್ಕೆ ಮುಂದಾಗಿರುವ ರೈತರಿಗೆ ಬೆಂಬಲವಾಗಿ ನಿಲ್ಲುತ್ತೇನೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಗಮನಕ್ಕೆ ತರುತ್ತೇನೆ ಎಂದರು.
ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಶಂಕರಗೌಡ ಎಂ.ಜಯನಗೌಡ್ರ, ಪ್ರಕಾಶ ಕಲ್ಯಾಣಿ ಮಾತನಾಡಿ, ಶಿರಹಟ್ಟಿಯಲ್ಲಿ ಕೃಷಿ ಹೊಂಡ ನಿರ್ಮಾಣದಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಿವೆ. ಹಳೆ ಹೊಳಗಟ್ಟೆಗೆ ಹೊಸ ಕಲ್ಲನ್ನು ಅಳವಡಿಸಿ ಬಿಲ್ ತೆಗೆಯುತ್ತಿದ್ದಾರೆ. ಕಳಪೆ ಪೈಪುಗಳನ್ನು ನೀಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇಲ್ಲಿ ಏಜೆಂಟರ ದರ್ಬಾರ್ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ದರವನ್ನೇ ಇಲ್ಲಿಯೂ ವಿಧಿಸಲಾಗುತ್ತಿದೆ. ಬೆಳೆ ವಿಮಾ ತುಂಬುವ ವೇಳೆಯಲ್ಲಿ ಅನೇಕ ರೈತರ ಅರ್ಜಿಗಳು ತಿರಸ್ಕೃತಗೊಂಡಿದ್ದು, ಇವುಗಳನ್ನು ಸರಿಪಡಿಸದೇ ಇದ್ದುರಿಂದ ರೈತರಿಗೆ ಸರಕಾರದ ಸೌಲಭ್ಯ ಸಿಗದಂತಾಗುತ್ತಿದೆ. ಈ ಬಗ್ಗೆ ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ, ರೈತ ಸಂಘಟನೆಗಳಿಗೆ ಲಭ್ಯವಿರುವ ಮಾಹಿತಿಯನ್ನು ನೀಡಲಾಗುವುದು ಎಂದರು.
ಲೋಕೇಶ ಜಾಲವಾಡಗಿ, ಶಿವಪುತ್ರಪ್ಪ ನೆಲಗುಡ್ಡದ, ರಮೇಶ ಕೋಳಿವಾಡ, ಅಶೋಕ ಭಾವನೂರ, ರಾಮನಗೌಡ ಪಾಟೀಲ, ತಿರಕನಗೌಡ ಪಾಟೀಲ, ಭರಮಗೌಡ ಪಾಟೀಲ, ರಾಮಪ್ಪ ಬಿಡನಾಳ ಮುಂತಾದವರು ಉಪಸ್ಥಿತರಿದ್ದರು.
ರೈತರ ಪ್ರತಿಭಟನೆಯ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಆಗಮಿಸಿದ ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ, ಪಿಎಸ್ಐ ಚನ್ನಯ್ಯ ದೇವೂರ, ರೈತರ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು.