ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಗವಾನ್ ಮಹಾವೀರರು ರಾಜ ಭೋಗಗಳನ್ನು ತ್ಯಜಿಸಿ ಅಹಿಂಸಾ ಮಾರ್ಗದ ಮೂಲಕ ಜೀವನವನ್ನು ಸಾಕ್ಷಾತ್ಕಾರಗೊಳಿಸಿದವರು ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ತಾಲೂಕಾಡಳಿತದ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಅಹಿಂಸೆ, ಸತ್ಯ, ಮತ್ತು ತಪಸ್ಸಿನ ಮಾರ್ಗವನ್ನು ತೋರಿದ ಮಹಾವೀರರ ವಿಚಾರಗಳು ಸದಾ ಸ್ಫೂರ್ತಿದಾಯಕ. ಭಗವಾನ್ ಮಹಾವೀರರ ಮಾನವೀಯ ಮೌಲ್ಯಗಳನ್ನು, ಉಪದೇಶಗಳನ್ನು ನಿತ್ಯ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜೈನ ಸಮಾಜದ ಯುವ ಮುಖಂಡ ಭೂಪಾಲ ಘೋಂಗಡಿ ಮಾತನಾಡಿ, ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆಗೆ ಕೊಂಡೊಯ್ದು, ತಾವೂ ಅದೇ ಮಾರ್ಗದಲ್ಲಿ ನಡೆದ ಮಹಾನ ಚೇತನ ಮಹಾವೀರರು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಉಪ ತಹಸೀಲ್ದಾರ ಪ್ರಶಾಂತ ಕಿಮಾಯಿ ಮನಿಯಾರ, ಕರಾಸನೌ ಸಂಘದ ತಾಲೂಕಾಧ್ಯಕ್ಷ ಗುರುರಾಜ ಹವಳದ, ಅರೋಗ್ಯ ಇಲಾಖೆಯ ಬಿ.ಎಸ್. ಹಿರೇಮಠ, ಜೈನ ಸಮಾಜದ ನಂದಕುಮಾರ ಪಾಟೀಲ್, ಎ.ಬಿ. ಪಾಟೀಲ್, ವಾಸಣ್ಣ ಪಾಟೀಲ್, ವಿನಯ ಪಾಟೀಲ್, ಪ್ರಕಾಶ ಪಾಟೀಲ್, ಮಹಾವೀರ ಘೋಂಗಡಿ ಸೇರಿದಂತೆ ಕಚೇರಿ ಸಿಬ್ಬಂದಿಗಳು ಇದ್ದರು.