ವಿಜಯಸಾಕ್ಷಿ ಸುದ್ದಿ, ಧಾರವಾಡ: ಡಾ. ಬಾಬಾಸಾಹೇಬ ಅಂಬೇಡ್ಕರರು ಮಹಾನ್ ಧೀಮಂತ ನಾಯಕರು. ಅವರ ಚಿಂತನೆಗಳು, ಕೊಡುಗೆಗಳು ವಿಶೇಷವಾಗಿ ಅವರು ರಚಿಸಿದ ಸಂವಿಧಾನ ರಾಷ್ಟ್ರಕ್ಕೆ ನೀಡಿದ ಬಹು ದೊಡ್ಡ ಕೊಡುಗೆಯಾಗಿದೆ. ಭೂಮಿಯ ಮೇಲೆ ಸೂರ್ಯ-ಚಂದ್ರರು ಇರುವವರೆಗೂ ಡಾ. ಅಂಬೇಡ್ಕರರ ಹೆಸರು ಶಾಶ್ವತವಾಗಿ ಇರುತ್ತದೆ ಎಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಅವರು ಸೋಮವಾರ ಬೆಳಿಗ್ಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತಕ್ಕೆ ಮಹಾ ಮನವತಾವಾದಿ ಬಸವಣ್ಣ ಮತ್ತು ಭಾರತ ರತ್ನ ಡಾ. ಅಂಬೇಡ್ಕರರು ಎರಡು ಕಣ್ಣುಗಳಿದಂತೆ. ಅವರ ತತ್ವ, ಸಂದೇಶಗಳು ನಮ್ಮ ಸಮಾಜಕ್ಕೆ ಸದಾ ಕಾಲ ದಾರಿದೀಪಗಳಾಗಿವೆ. ಈ ಎರಡೂ ದಿವ್ಯ ಜ್ಯೋತಿಗಳು ಬೆಳಗಿದಷ್ಟು, ಭಾರತ ವಿಶ್ವದಲ್ಲಿ ಪ್ರಜ್ವಲಿಸಿ, ಪ್ರಕಾಶಿಸುತ್ತದೆ ಎಂದರು.
ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳನ್ನು ನೀಡಿ, ಮಹಿಳಾ ಅಭಿವೃದ್ಧಿಗೆ ಡಾ.ಅಂಬೇಡ್ಕರರು ಅವಕಾಶ ಕಲ್ಪಿಸಿದ್ದಾರೆ. ಮಹಿಳೆಯರ ಪ್ರಗತಿ ಮೇಲೆ ದೇಶದ ಅಭಿವೃದ್ಧಿ ಅವಲಂಬಿಸಿದೆ ಎಂದು ಅವರು ನಂಬಿದ್ದರು. ಅದಕ್ಕಾಗಿ ಮಹಿಳೆಯರ ಹಕ್ಕು, ಸ್ವಾತಂತ್ರ್ಯಗಳಿಗೆ ವಿಶೇಷ ಆದ್ಯತೆ ನೀಡಿದ್ದಾರೆ ಎಂದು ವಿವರಿಸಿದರು.
ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ದೇಶ ಉಳಿಯಲು ಸಂವಿಧಾನವೇ ಕಾರಣವಾಗಿದೆ. ಪ್ರತಿಯೊಬ್ಬ ಭಾರತೀಯನು ಭಾರತದ ಸಂವಿಧಾನವನ್ನು ಓದಬೇಕು. ವಿಶ್ವದ ಅತ್ಯುತ್ತಮ, ಶ್ರೇಷ್ಠ ಸಂವಿಧಾನವಾಗಿ ಗುರುತಿಸಿಕೊಂಡಿದೆ. ಸಂವಿಧಾನದ ಕಾನೂನು, ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಕೀರ ಸನದಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿ.ಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ, ರಾಜು ಕೊಟ್ಯಾನವರ, ಕಲ್ಮೇಶ ಹಾದಿಮನಿ, ಎಂ.ಅರವಿಂದ, ಬೌದ್ದ ಬಿಕ್ಕುಗಳು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಮುಖಂಡರು ಇದ್ದರು. ಅಥಣಿಯ ನ್ಯಾಯವಾದಿ ಡಾ. ಗೌತಮ ಬನಸೋಡೆ ಡಾ. ಅಂಬೇಡ್ಕರರ ಜೀವನ ಚರಿತ್ರೆ ಕುರಿತು ಪ್ರಧಾನ ಭಾಷಣ ಮಾಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ಸ್ವಾತಂತ್ರ್ಯ ಪ್ರತಿಪಾದಿಸಿದ ಡಾ. ಬಿ.ಆರ್. ಅಂಬೇಡ್ಕರರು ಸಂವಿಧಾನ ರಚಿಸುವ ಮೂಲಕ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ಥಾನಮಾನ ನೀಡಿದ್ದಾರೆ. ಅವರು ಸಮಾಜ ಸುಧಾರಣೆಗಿಂತ, ಪುನರ್ ನಿರ್ಮಾಣ ಮಾಡಿದರು. ಸದೃಢ ಸಮಾಜ ನಿರ್ಮಾಣಕ್ಕೆ ಅವರು ಸದಾಕಾಲ ಶ್ರಮಿಸಿದರು ಎಂದು ತಿಳಿಸಿದರು.