ತತ್ವ ವಿರೋಧಿಗಳ ಬಗ್ಗೆ ಎಚ್ಚರದಿಂದಿರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲಿಂಗಾಯತ ಧರ್ಮದ ಅಸ್ಮಿತೆಗೆ ಧಕ್ಕೆ ತರುವ, ಲಿಂಗಾಯತರಲ್ಲಿ, ಬಸವ ಅನುಯಾಯಿಗಳಲ್ಲಿ ಗೊಂದಲ ಹುಟ್ಟಿಸಿ, ಅವೈದಿಕ ಲಿಂಗಾಯತ ಧರ್ಮಕ್ಕೆ ಧಕ್ಕೆಯಾಗುವಂತೆ, ಮರಳಿ ವೈದಿಕಕ್ಕೆ ತರುವ ಹುನ್ನಾರವೇ `ವಚನ ದರ್ಶನ’ ಕೃತಿಯ ಉದ್ದೇಶವಾಗಿದೆ. ಇದಕ್ಕೆ ಪ್ರತಿಯಾಗಿ ಎಚ್ಚೆತ್ತ ನಾವು `ವಚನ ದರ್ಶನ-ಮಿಥ್ಯ-ಸತ್ಯ’ವೆಂಬ ಪ್ರಕಟಿಸಿ ರಾಜ್ಯಾದ್ಯಂತ ಲೋಕಾರ್ಪಣೆ ಮಾಡುತ್ತಿದ್ದೇವೆಂದು ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ ಶಿವಾನಂದ ಜಾಮದಾರ ಹೇಳಿದರು.

Advertisement

ಅವರು ಗದುಗಿನ ಜ.ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡುತ್ತಾ, ವಚನ ದರ್ಶನ ಕೃತಿಯನ್ನು ರಾಜ್ಯದ 9 ಜಿಲ್ಲೆಗಳಲ್ಲಿ ಅದ್ದೂರಿಯಾಗಿ, ಭಾರೀ ಪ್ರಚಾರ ನೀಡಿ ಬಿಡುಗಡೆಗೊಳಿಸಲಾಯಿತು. ಈ ಗ್ರಂಥದ 21 ಲೇಖನಗಳ ಪೈಕಿ 16 ಲೇಖಕರು ಲಿಂಗಾಯತರೇ ಅಲ್ಲ. ಇವರೆಲ್ಲ ಶರಣ ತತ್ವ ವಿರೋಧಿಸುವ ಸಂಘ ಪರಿವಾರದವರು. ಅವರಿಂದ ಬಂದ ಲೇಖನಗಳು ಸಂಪೂರ್ಣ ಲಿಂಗಾಯತ ವಿರೋಧಿಯಾಗಿವೆ ಎಂದು ಆರೋಪಿಸಿದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಜ. ತೋಂಟದಾರ್ಯ ಮಠದ ಪ.ಪೂ.ಶ್ರೀ ಸಿದ್ಧರಾಮ ಮಹಾಸ್ವಾಮೀಜಿ ವಹಿಸಿದ್ದರು. ಗ್ರಂಥ ಪರಿಚಯ ಶಿವಾನಂದ ಜಾಮದಾರ ಮಾಡಿದರು. ಸಭೆಯನ್ನು ಮೂರು ಸಾವಿರ ಮಠದ ಪೂ.ಶ್ರೀ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು. ಷಟಸ್ಥಲ ಧ್ವಜಾ ರೋಹಣವನ್ನು ಪೂ. ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಗಳು ನೆರವೇರಿಸಿದರು.

ಸಮ್ಮುಖವನ್ನು ಪೂ.ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಪೂ.ಶ್ರೀ ಶಾಂತಲಿAಗ ಮಹಾಸ್ವಾಮಿಗಳು ಶಿರೋಳ, ಪೂ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ನಂದಿವೇರಿಮಠ ಮುಖ್ಯ ಅತಿಥಿಗಳಾಗಿದ್ದರು. ಜಾ.ಲಿ.ಮಂ ಜಿಲ್ಲಾಧ್ಯಕ್ಷ ಕೆ.ಎಸ್. ಚೆಟ್ಟಿ ಸ್ವಾಗತಿಸಿದರು. ಎಸ್.ಎ. ಮುಗದ ನಿರೂಪಿಸಿದರು. ಮಹಾಂತೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶರಣಬಸಪ್ಪ ಗುಡಿಮನಿ, ಡಾ. ಧನೇಶ ದೇಸಾಯಿ, ಬಾಲಚಂದ್ರ ಭರಮಗೌಡ್ರ, ವಿಜಯಲಕ್ಷ್ಮೀ ಮಾನ್ವಿ, ಫಕೀರಪ್ಪ ಹೆಬಸೂರ, ಪ್ರಕಾಶ ಘೋಡಕೆ, ಎಸ್.ಎನ್. ಬಳ್ಳಾರಿ, ಬಿ.ಎನ್. ಯರನಾಳ, ಬಿ.ವಾಯ್ ಹಡಪದ, ಆಂಜನೇಯ ಕಟಗಿ, ಬಸವರಾಜ ಹೂಗಾರ, ದಶರಥ ಕೊಳ್ಳಿ, ಶಿವಕುಮಾರ ಪಾಟೀಲ, ಕೆ.ಎ. ಬಳಿಗೇರ, ಮುನವಳ್ಳಿ, ಅನಿಲ ಪಾಟೀಲ, ವಿರೇಶ ಮುನವಳ್ಳಿ, ಡಾ. ಸುರೇಶಬಾಬು ನಾರಾಯಣಪೂರ, ಚಕ್ಕಪ್ಪ ಕುಂಬಾರ, ಶರೀಫ ಬಿಳೆಯಲಿ, ಸುಧಾ ಹುಚ್ಚಣ್ಣವರ, ಜಯಶ್ರೀ ಹುಬ್ಬಳ್ಳಿ, ಶಾಂತಾ ತುಪ್ಪದ ಪಾಲ್ಗೊಂಡಿದ್ದರು. ಶರಣು ಸಮರ್ಪಣೆಯನ್ನು ಶೇಖಣ್ಣ ಕವಳಿಕಾಯಿ ನೆರವೇರಿಸಿದರು.

ಈ ಗ್ರಂಥದ ಮೂಲಕ ಸಂವಿಧಾನದ ಸದಾಶಯಗಳಿಗೆ ವಿರುದ್ಧವಾಗಿ ಲಿಂಗಾಯತರ ಮೂಲ ನಂಬಿಕೆ, ಆಶಯಗಳಿಗೆ ವಿರೋಧವಾಗಿ, ಒತ್ತಾಯದಿಂದ ತಮ್ಮ ನಂಬಿಕೆಗಳನ್ನು ಹೇರುವುದಾಗಿದೆ. ನಾವು ಈ ಪರಿವಾರದ ಹುನ್ನಾರ ಅರಿಯಬೇಕಾಗಿದೆ. ಉದಾತ್ತ, ಜಾತಿರಹಿತ, ಸಮ ಸಮಾಜ ನಿರ್ಮಾಣದ, ಅವೈದಿಕ ತತ್ವ ಪ್ರಣೀತ ಲಿಂಗಾಯತ ಧರ್ಮ ಸಿದ್ಧಾಂತಗಳಿಗೆ ಮುಸುಗೆಳೆದು ತಮ್ಮ ವೈದಿಕತೆ ಮೆರೆಸುವುದೇ ಇವರ ಒಳಗಿರುವ ಆಶಯವೆಂಬುದನ್ನಿಲ್ಲಿ ಅರಿಯಬೇಕಾಗಿದೆ ಎಂದು ಶಿವಾನಂದ ಜಾಮದಾರ ಎಚ್ಚರಿಸಿದರು.


Spread the love

LEAVE A REPLY

Please enter your comment!
Please enter your name here