ವಿಜಯನಗರ: ಒಂದು ಲಕ್ಷ ಕುಟುಂಬಕ್ಕೆ ನಾವು ಅವರ ಆಸ್ತಿಗಳ ಹಕ್ಕು ವರ್ಗಾವಣೆ ಮಾಡಿದ್ದೇವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಐದು ಗ್ಯಾರಂಟಿಗಳ ಜೊತೆಗೆ ಬಡ ಜನರಿಗೆ ಹಕ್ಕು ಪತ್ರ ಕೊಡಬೇಕು ಎಂದುಕೊಂಡಿದ್ದೆವೆ.
ಇಲ್ಲಿ ಎಲ್ಲಾ ಜಾತಿ ಧರ್ಮದವರಿದ್ದಾರೆ. ಇವರಿಗೆ ಹತ್ತಾರು ವರ್ಷದಿಂದ ಆಸ್ತಿಗಳ ಪತ್ರ ಇರಲಿಲ್ಲ. ಈ ವಿಷಯದ ಬಗ್ಗೆ ನಮ್ಮ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿದೆ. ಇಂದು ಅತ್ಯಂತ ಸಂತಸದಿಂದ ಹೇಳುತ್ತಿದ್ದೇನೆ.
ಇವತ್ತು ನಾವು ಅವರಿಗೆ ಹಕ್ಕು ಪತ್ರ ಕೊಟ್ಟಿದ್ದೇವೆ. ಒಂದು ಲಕ್ಷ ಕುಟುಂಬಕ್ಕೆ ನಾವು ಅವರ ಆಸ್ತಿಗಳ ಹಕ್ಕು ವರ್ಗಾವಣೆ ಮಾಡಿದ್ದೇವೆ. ಇಂದಿರಾಗಾಂಧಿ ಅವರು ಕನಸು ಕೂಡಾ ಇದಾಗಿತ್ತು. ಅದನ್ನ ಇವತ್ತು ನನಸು ಮಾಡಿದ್ದೇವೆ ಎಂದು ಹೇಳಿದರು.
ಇನ್ನಷ್ಟು ಪ್ರದೇಶಗಳನ್ನು ಕಂದಾಯ ಗ್ರಾಮ ಮಾಡುವ ಉದ್ದೇಶವಿದೆ. ಯಾರೊಬ್ಬರೂ ಹಕ್ಕು ಪತ್ರ ಇಲ್ಲದೇ ಇರಬಾರದು. ಗ್ಯಾರಂಟಿ ಸಮಿತಿಗಳು ಹಕ್ಕು ಪತ್ರ ಪರಿಶೀಲಿಸುವ ಕೆಲಸ ಮಾಡಬೇಕು. ನಾವು ಕೊಟ್ಟ ಯೋಜನೆ, ಹಣ ಬಡ ಜನರಿಗೆ ಅನುಕೂಲ ಆಗುತ್ತಿದೆ ಎಂದರು.