ವಿಜಯಸಾಕ್ಷಿ ಸುದ್ದಿ, ಗದಗ: ಜಿಎನ್ಟಿಟಿಎಫ್ ಸಂಸ್ಥೆ ಮೂಲಕ ಯುವಜನತೆಯ ಕೌಶಲ್ಯ ಅಭಿವೃದ್ಧಿಪಡಿಸುವ ತರಬೇತಿ ನೀಡಿ ಉದ್ಯೋಗವನ್ನು ಪಡೆಯುವಂತ ಕಾರ್ಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಗದಗ ಕೋ-ಆಪರೇಟೀವ್ ಇಂಡಸ್ಟತ್ರಿಯಲ್ ಎಸ್ಟೇಟ್ ಆವರಣದಲ್ಲಿ ಮಂಗಳವಾರ ಜಿಎನ್ಟಿಟಿಎಫ್ ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಿಎನ್ಟಿಟಿಎಫ್ ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ಗದಗ ನಗರದಲ್ಲಿ ಪ್ರಾರಂಭಿಸಿದ್ದು ಸಂತೋಷದ ವಿಷಯವಾಗಿದೆ. ಈಗಾಗಲೇ ಈ ಸಂಸ್ಥೆ ರಾಜ್ಯದ 16 ಕಡೆ ಕಾರ್ಯನಿರ್ವಸುತ್ತಿದ್ದು, ಹಲವಾರು ತರಬೇತಿಗಳ ಮೂಲಕ ಯುವಜನತೆಯ ಕೆಲಸಕ್ಕೆ ಬೇಕಾದ ಕೌಶಲ್ಯವನ್ನು ತರಬೇತಿ ಮೂಲಕ ನೀಡುತ್ತಿದೆ. ಯುವ ಜನರಿಗೆ ಕೌಶಲ್ಯ ಅಭಿವೃದ್ಧಿ ಆಗಬೇಕು. ಇಲ್ಲದಿದ್ದರೆ ಉದ್ಯೋಗ ದೊರಕಿಸಿಕೊಳ್ಳುವುದು ಕಷ್ಟ. ಈಗಿನ ಮಾರುಕಟ್ಟಯಲ್ಲಿರುವ ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ದಿನದಿಂದ ದಿನಕ್ಕೆ ಅಭಿವೃದ್ಧಿಪಡಿಸಿಕೊಳ್ಳಬೇಕು. ಕೌಶಲ್ಯ ಇಲ್ಲದೆ ಹೋದರೆ ಯುವಕರಿಗೆ ಕೆಲಸ ಸಿಗುವುದಿಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ, ಪೌರಾಡಳಿತ ಮತ್ತ ಹಜ್ ಸಚಿವ ರಹೀಂ ಖಾನ್, ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ನರಗುಂದ ವಿಧಾನಸಭೆ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಎನ್. ಟಿಟಿಎಫ್ ಚೇರಮನ್ ಕೃಷ್ಣಗೌಡ ಪಾಟೀಲ ಸೇರಿದಂತೆ ಗಣ್ಯರು ಹಾಜರಿದ್ದರು.
ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಮೂಲಕ ನಿರುದ್ಯೋಗಿ ಪದವೀಧರಿಗೆ 3000 ರೂ, ಡಿಪ್ಲೊಮಾ ಕಲಿತವರಿಗೆ 1500 ರೂನಂತೆ 2 ವರ್ಷಗಳ ಕಾಲ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯನ್ನು ನೀಡುಲಾಗುತ್ತಿದೆ. ಈ 2 ವರ್ಷದಲ್ಲಿ ಯುವಜನತೆ ತಮಗೆ ಆಸಕ್ತಿಯಿರುವ ಯಾವುದಾದರು ಒಂದು ಕೌಶಲ್ಯವನ್ನು ಅಭಿವೃದ್ಧಿಪಡೆಸಿಕೊಳ್ಳಲು ಕೌಶ್ಯಭಿವೃದ್ಧಿ ಇಲಾಖೆಯಿಂದ ತರಬೇತಿ ನೀಡಬೇಕೆಂದು ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಸೂಚಿಸಲಾಗಿದೆ. ಅದರಂತೆ ಅವರು ಕೌಶಲ್ಯ ಅಭಿವೃದ್ಧಿಪಡಿಸುವ ತರಬೇತಿ ಕೈಗೊಳ್ಳುತ್ತಿದ್ದು, ಉದ್ಯೋಗ ಮೇಳವನ್ನು ಏರ್ಪಡಿಸಿ ಉದ್ಯಮಿ ಮತ್ತು ಉದ್ಯೋಗ ಆಕಾಂಕ್ಷಿಗಳ ವೇದಿಕೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.