ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 18 ವರ್ಷಗಳ ಕನಸು ಕೆಲ ಘಂಟೆಗಳ ಕಾಲವೂ ಉಳಿಯಲಿಲ್ಲ. ಆರ್ ಸಿಬಿ ಪ್ಲೇಯರ್ಸ್ ನ ನೋಡಬಹುದು. ಟ್ರೋಪಿ ಗೆದ್ದ ಸಂಭ್ರಮದಲ್ಲಿ ನಾವು ಭಾಗಿಯಾಗಬಹುದು ಎಂದು ಹೋಗಿದ್ದ ಹಲವರು ಇಹಲೋಕ ತ್ಯಜಿಸಿದ್ದಾರೆ. ಇದೀಗ ಘಟನೆ ನಡೆದ ಸ್ಥಳದಲ್ಲೇ ಇದ್ದ ರ್ಯಾಪರ್ ಚಂದನ್ ಶೆಟ್ಟಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ತಿಳಿಸಿದ್ದಾರೆ.
ಆರ್ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ 11 ಮಂದಿಯ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, ಗೇಟ್ ನಂಬರ್ 3ರಲ್ಲಿ ಹೋಗಲು ನನಗೆ ಪಾಸ್ ಸಿಕ್ಕಿತ್ತು. ಗೇಟ್ ನಂಬರ್ 3ಕ್ಕೆ ತಲುಪಲು ಆಗಲೇ ಇಲ್ಲ, ಅಷ್ಟು ಜನ ಸೇರಿದ್ದರು. ಗೇಟ್ ನಂಬರ್ 10ಕ್ಕೆ ಹೋದೆ, ಅಲ್ಲೂ ತುಂಬಾ ಜನರಿದ್ದರು. ಜನರ ಮಧ್ಯೆ ಸಿಲುಕಿ ನನಗೂ ಉಸಿರಾಡಲು ಕಷ್ಟ ಆಯಿತು. ಅದೆಷ್ಟು ಕಷ್ಟ ಆಗಿರಬಹುದು ಎನ್ನುವುದು ನನಗೆ ಅನಿಸಿತು. ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ ಚಂದನ್ ಶೆಟ್ಟಿ.
ತುಂಬಾ ಬೇಜಾರಾಗ್ತಿದೆ. ಇದಕ್ಕೆ ಯಾರು ಹೊಣೆ ಅಂತ ಹೇಳೋಕೆ ಕಷ್ಟ ಆಗ್ತಿದೆ, ಸರಿಯಾಗಿ ಆರ್ಗನೈಸ್ ಮಾಡಿಲ್ವಾ? 18 ವರ್ಷಗಳ ಕಾಲ ಕಾದಿರುವಂತಹ ಈ ದಿನದ ಎಕ್ಸೈಟ್ಮೆಂಟ್ ಹೀಗಿರುತ್ತೆ ಅಂತ ಯಾರಿಗೂ ಗೊತ್ತಿರಲಿಲ್ಲ ಅನಿಸುತ್ತೆ.
ಇನ್ನೊಂದೆರಡು ದಿನ ಬಿಟ್ಟು ಶನಿವಾರ, ಭಾನುವಾರ ಇವೆಂಟ್ ಆರ್ಗನೈಸ್ ಮಾಡ್ಬೋದಾಗಿತ್ತು. ಟಿಕೆಟ್ ಇಟ್ಟು ಆಗ ಕಾರ್ಯಕ್ರಮ ಆಯೋಜಿಸಬಹುದಾಗಿತ್ತು. ಇನ್ನೂ ಯಾರ್ಯಾರು ಐಸಿಯುನಲ್ಲಿದ್ದಾರೋ ಅವರೆಲ್ಲ ಹುಷಾರಾಗಿ ಬರಲಿ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆ, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಲ್ಲಿ ಆರು ಮಂದಿ ಮತ್ತು ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 12 ಮಂದಿ ಚೇತರಿಸಿಕೊಂಡಿದ್ದಾರೆ. ಹೆತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.