ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಚೆಸ್ ಅಸೋಷಿಯೇಷನ್ ವತಿಯಿಂದ ಈಗಾಗಲೇ ಹಲವಾರು ಚೆಸ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಿದೆ. ಇದೀಗ ಜೂನ್ 29ರಂದು ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ರಾಮರಾವ್ ವೆರ್ಣೆಕರ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಗದಗ ಜಿಲ್ಲಾ ಚೆಸ್ ಅಸೋಸಿಯೇಶನ್ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಚೆಸ್ ಆಟದಿಂದ ಮಕ್ಕಳ ಬುದ್ಧಿಶಕ್ತಿ ವೃದ್ಧಿಯಾಗುತ್ತದೆ ಎನ್ನುವದು ಎಲ್ಲರಿಗೂ ತಿಳಿದ ವಿಷಯವಾಗಿದ್ದು, ಮಕ್ಕಳಲ್ಲಿ ಈ ಆಟದ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡುವದು ನಮ್ಮ ಅಸೋಷಿಯೇಷನ್ದ ಉದ್ದೇಶವಾಗಿದೆ. ಜೂನ್ 29ರಂದು ನಡೆಯುವ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ 14 ಹಾಗೂ 17 ವರ್ಷದೊಳಗಿನ ಮತ್ತು ಮುಕ್ತ ಚೆಸ್ ಪಂದ್ಯಾವಳಿ ನಡೆಯಲಿದೆ. ಒಟ್ಟೂ 50 ಸಾವಿರ ರೂಗಳ ನಗದು ಬಹುಮಾನ ಹಾಗೂ 21 ಆಕರ್ಷಕ ಟ್ರೋಪಿಗಳನ್ನು ವಿಜೇತರಿಗೆ ನೀಡಲಾಗುವದು. ಇದಕ್ಕಾಗಿ ಚೆಸ್ ಆಟಗಾರರು, ರಾಜ್ಯ ಚೆಸ್ ಅಸೋಷಿಯೇಷನ್ ಹಾಗೂ ಪಟ್ಟಣದ ಜನತೆ ಪ್ರೋತ್ಸಾಹ ನೀಡುತ್ತಿದ್ದು, ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸೋಣ ಎಂದು ಹೇಳಿದರು.
ಅಸೋಷಿಯೇಷನ್ ಜಿಲ್ಲಾ ಅಧ್ಯಕ್ಷ ಗಿರೀಶ ಅಗಡಿ ಮಾತನಾಡಿ, ಚೆಸ್ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಮೂಡಿಸಬೇಕು ಎನ್ನುವ ಉದ್ದೇಶವನ್ನು ಗದಗ ಜಿಲ್ಲಾ ಅಸೋಷಿಯೇಷನ್ ಹೊಂದಿದೆ. ಅದರಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಮಕ್ಕಳು ಈ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ರಾಜ್ಯ, ರಾಷ್ಟçಮಟ್ಟದವರೆಗೂ ನಮ್ಮ ಜಿಲ್ಲೆಗೆ ಕೀರ್ತಿ ತರಬೇಕು ಎನ್ನುವ ಉದ್ದೇಶವನ್ನು ಹೊಂದಲಾಗಿದೆ. ಈಗಾಗಲೇ ಹಲವಾರು ಮಕ್ಕಳು ರಾಷ್ಟ್ರಮಟ್ಟದವರೆಗೂ ತಮ್ಮ ಸಾಧನೆಯನ್ನು ಬಿಂಬಿಸಿದ್ದು ನಮ್ಮ ಅಸೋಷಿಯೇಷನ್ನ ಹೆಮ್ಮೆಯಾಗಿದೆ. ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ ಜೂನ್ 29ರಂದು ಲಕ್ಷ್ಮೇಶ್ವರ ಬಾಳಿಹಳ್ಳಿಮಠ ಕಲ್ಯಾಣ ಮಂಟಪದ ವಿಶಾಲವಾದ ಸಭಾಂಗಣದಲ್ಲಿ ನಡೆಯಲಿದೆ. ಈ ಹಿಂದೆ ಸಂಘಟಿಸಿದ್ದ ಎಲ್ಲ ಪಂದ್ಯಾವಳಿಗಳು ಯಶಸ್ವಿಯಾಗಿದ್ದು, ಈ ಬಾರಿಯೂ ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡುವ ವಿಶ್ವಾಸವಿದೆ ಎಂದರು.
ಶಿಕ್ಷಕ ಎಂ.ಆಯ್. ಕಣಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ವಭಾವಿ ಸಭೆಯಲ್ಲಿ ಉಪಾಧ್ಯಕ್ಷ ಎಸ್.ಎಂ. ಉಮ್ಮಣ್ಣವರ, ಎಎಸ್ಐ ಎನ್.ಎ. ಮೌಲ್ವಿ, ಆದೇಶ ಹುಲಗೂರ, ಮಂಜುನಾಥ ಅಂಗಡಿ, ಎ.ಜಿ. ಬೂದಿಹಾಳ, ಶ್ರೀಕಾಂತ ಪೂಜಾರ, ರಮೇಶ ಗಾಂಜಿ, ಎಸ್.ಪಿ. ಕಟ್ಟೆಣ್ಣವರ ಮುಂತಾದವರಿದ್ದರು.
ಪಂದ್ಯಾವಳಿಯಲ್ಲಿ ಹೆಸರು ನೊಂದಾಯಿಸುವವರು ಪ್ರಮೋದರಾಜ್ ಮೊ-9844042170 (ವಾಟ್ಸಾಪ್), ಜ್ಞಾನದೀಪ್ ಸಾಗರ್-9964298665, ಗಿರೀಶ್ ಎಂ.ಅಗಡಿ, ಎಸ್.ಎಂ. ಉಮ್ಮಣ್ಣವರ್, ಎಂಐ ಕಣಕೆ-9945859815 ಇವರನ್ನು ಸಂಪರ್ಕಿಸಬಹುದಾಗಿದೆ.