ರಸ್ತೆ ಕಾಮಗಾರಿ ವಿಳಂಬದಿಂದ ತೊಂದರೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಚಾವಡಿಯಿಂದ ಬ್ರಹ್ಮದೇವರ ವೃತ್ತದವರೆಗೆ ಸಿಸಿ ರಸ್ತೆ ಮಾಡಲು ರಸ್ತೆಯನ್ನು ಅಗೆದು ಎರಡು ತಿಂಗಳಾದರೂ ಕಾಮಗಾರಿ ಮಾಡದಿರುವ ಬಗ್ಗೆ ಪುರಸಭೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಪಟ್ಟಣದ ಬಜಾರ ವ್ಯಾಪಾರಸ್ಥರ ಸಂಘದವರು ಮಂಗಳವಾರ ಪುರಸಭೆಗೆ ತೆರಳಿ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ರಸ್ತೆ ಕಾಮಗಾರಿ ವಿಳಂಬದಿಂದ ತೊಂದರೆಯಾಗುತ್ತಿದ್ದು, ವ್ಯಾಪಾರಸ್ಥರ ಮನವಿಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ರಸ್ತೆ ಅಗೆದು ಎರಡು ತಿಂಗಳಿಂದ ಹಾಗೆಯೇ ಕೈಬಿಟ್ಟಿದ್ದೀರಿ. ಈಗ ಮಳೆಗಾಲ ಪ್ರಾರಂಭವಾಗಿರುವದರಿಂದ ರಸ್ತೆಯಲ್ಲಿ ನೀರು ತುಂಬಿ ಕೆರೆಯಂತಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ, ವಯಸ್ಸಾದವರಿಗೆ, ಸಣ್ಣ ಪುಟ್ಟ ವ್ಯಾಪಾಸ್ಥರಿಗೆ ಹಾಗೂ ವಾಹನ ಸಂಚಾರಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಪಟ್ಟಣದಲ್ಲಿ ವ್ಯಾಪಾರವೂ ಕುಂಠಿತವಾಗುತ್ತಿದ್ದು, ಇದರ ಬಗ್ಗೆ ಪುರಸಭೆಯವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ವ್ಯಾಪಾರಸ್ಥರಿಗೆ ಸಮಜಾಯಿಷಿ ನೀಡಿದ ಮುಖ್ಯಾಧಿಕಾರಿ ಮಹೇಶ ಹಡಪದ, ರಸ್ತೆಗಾಗಿ ಹಾಕಲು ತಂದಿರುವ ಮಣ್ಣ ಗುಣಮಟ್ಟದಲ್ಲಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಮಣ್ಣು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ತಕ್ಷಣ ಗುತ್ತಿಗೆದಾರರನ್ನು ಕರೆಯಿಸಿ ಕಾಮಗಾರಿ ಪ್ರಾರಂಭಿಸುವದಾಗಿ ಹೇಳಿದರು. ಈ ಮಾತಿಗೆ ಒಪ್ಪದ ವ್ಯಾಪಾರಸ್ಥರು ಮಣ್ಣು ಪರೀಕ್ಷೆಗೆ ತಿಂಗಳುಗಟ್ಟಲೆ ಕಾಯಬೇಕೆ, ಎರಡು ಮೂರು ದಿನದಲ್ಲಿ ಮಣ್ಣು ಪರೀಕ್ಷೆ ವರದಿ ಬರುತ್ತದೆ. ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದ್ದಿರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾದಿಕಾರಿ ಮಹೇಶ ಹಡಪದ ಗುತ್ತಿಗೆದಾರನ್ನು ಕರೆಸಿ ಮಾತನಾಡಿ, ಒಂದು ವಾರದೊಳಗೆ ಸಿಸಿ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಒಂದು ವಾರದೊಳಗೆ ಕಾಮಗಾರಿ ಪ್ರಾರಂಭವಾಗದಿದ್ದಲ್ಲಿ ಬಜಾರ ಬಂದ್ ಮಾಡಿ ಧರಣಿ ಕೈಗೊಳ್ಳುತ್ತೇವೆ ಎಂದು ವ್ಯಾಪಾರಸ್ಥರು ತಿಳಿಸಿದರು. ಪುರಸಭೆ ಸದಸ್ಯ ರಾಜೀವ ಕುಂಬಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ ಇದ್ದರು.

ಈ ವೇಳೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ಅಶೋಕ್ ಬಟಗುರ್ಕಿ, ಮಲ್ಲಿಕಾರ್ಜುನ ಮಹಾಂತಶೆಟ್ಟರ, ಧವಚಂದ ಮುಥಾ, ಆದಿನಾಥ ಬರಿಗಾಲಿ, ಮಾಲತೇಶ ಅಗಡಿ, ಸಂತೋಷ ಗೋಗಿ, ಡಿ.ವಿ. ಹಿರೇಮಠ, ದೀಪು ಬಟಗುರ್ಕಿ, ರವಿ ಪುರಾಣಿಕಮಠ, ನಾಗರಾಜ ಚಿಂಚಲಿ, ಶಕ್ತಿ ಕತ್ತಿ, ವೈಭವ ಗೋಗಿ, ಪ್ರಭು ನವಲೆ, ರಂಜಿತ್ ಜೈನ್, ನಾಗನಗೌಡ ಪಾಟೀಲ್, ಟಾಕಪ್ಪ ಸಾತಪುತೆ, ಜ್ಞಾನೋಬಾ ಬೋಮಲೆ ಮುಂತಾದವರಿದ್ದರು.

ನಂತರ ಪುರಸಭೆಗೆ ಸಲ್ಲಿಸಿದ ಮನವಿಯಲ್ಲಿ, ಪಟ್ಟಣದ ಪ್ರಮುಖ ಗಟಾರುಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗುವಂತೆ ಮಾಡುವದು, ಬಜಾರ ರಸ್ತೆಯ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವದು, ಬೀದಿ ಬದಿ ವ್ಯಾಪಾರಸ್ಥರು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವದರಿಂದ ವಾಹನ ನಿಲುಗಡೆಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವದು, ಪ್ರಮುಖ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಅಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here