ವಿಜಯಸಾಕ್ಷಿ ಸುದ್ದಿ, ಗದಗ: ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಒಂದು ಅಪರಾಧವಾಗಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಸಮಗ್ರ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಸಂಪೂರ್ಣ ಒಂದು ಪೀಳಿಗೆಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಯುವಕರ ದೈಹಿಕ, ಮಾನಸಿಕ, ನೈತಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಇದರಿಂದ ಉಂಟಾಗುವ ಹಾನಿ ಅಪಾರ ಎಂದು ಬೆಟಗೇರಿ ವೃತ್ತದ ಸಿಪಿಐ ಧೀರಜ್ ಶಿಂಧೆ ಹೇಳಿದರು.
ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಚರಿಸುತ್ತಿರುವ ನಿಮಿತ್ತ ಬೆಟಗೇರಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಾದಕ ದ್ರವ್ಯಗಳ ದುರ್ವ್ಯಸನವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಹೋರಾಡಲು, ಪೊಲೀಸ್ ಅಧಿಕಾರಿಗಳು ದಂಡನಾತ್ಮಕ ಕ್ರಮಗಳು ಮತ್ತು ಜನರಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಅರಿವು ಮೂಡಿಸುವ ಪರಿಣಾಮಕಾರಿ ತಂತ್ರಗಳನ್ನು ರೂಪಿಸಬೇಕು. ಪ್ರತಿವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷವೂ ಸಹ ಎಲ್ಲಾ ಘಟಕಗಳ ಅಧಿಕಾರಿಗಳು ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾಗಿ ಆಚರಿಸುವ ಮೂಲಕ ಶಿಕ್ಷಣ ಸಂಸ್ಥೆ, ಸಂಘ-ಸಂಸ್ಥೆಗಳು, ಯುವಕರ ಕ್ಲಬ್, ಕ್ರೀಡಾಪಟುಗಳು, ಧಾರ್ಮಿಕ ಮತ್ತು ಆಧ್ಯಾತ್ಮಕ ಚಿಂತಕರು ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಬೈಕ್ ರ್ಯಾಲಿಯು ಬೆಟಿಗೇರಿ ಬಸ್ ನಿಲ್ದಾಣದಿಂದ ಆರಂಭಗೊಂಡು ತೆಂಗಿನಕಾಯಿ ಬಜಾರ್, ಕುರಹಟ್ಟಿಪೇಟೆ ಮಾರ್ಗವಾಗಿ ಹಾತಲಗೇರಿ ನಾಕಾ, ಕೆ.ಸಿ. ರಾಣಿ ರೋಡ್, ಗಾಂಧಿ ಸರ್ಕಲ್ ಮೂಲಕ ಹಾಯ್ದು ಮುನ್ಸಿಪಲ್ ಮೈದಾನಕ್ಕೆ ಬಂದು ಮುಕ್ತಾಯಯಗೊಂಡಿತು. ರ್ಯಾಲಿಯಲ್ಲಿ ಬೆಟಿಗೇರಿ ಬಡಾವಣೆ ರಾಜೀವಗಾಂಧಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಜೋಗದಂಡ್ಕರ್, ಬೆಟಗೇರಿ ಬಡಾವಣೆ ಪಿಎಸ್ಐ ಲಕ್ಷ್ಮಪ್ಪ ಆರಿ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.