ಬೆಂಗಳೂರು: ದಸರಾ ಉದ್ಘಾಟನೆಯಿಂದ ಬಾನು ಮುಷ್ತಾಕ್ʼರನ್ನು ಸರ್ಕಾರ ಕೈಬಿಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲ್ಲ ಅಂತ ಭಾವಿಸುತ್ತೇನೆ. ಅವರು ಕಾರ್ಯಕ್ರಮದಿಂದ ಹೊರಗೆ ಉಳಿಯಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಇನ್ನೂ ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡೇಶ್ವರಿ ದೇವಿ ಮೇಲೆ ನಂಬಿಕೆ ಇದೆಯಾ ಹೇಳಲಿ. ನಂಬಿಕೆ ಇದ್ರೆ ಬನ್ನಿ, ನಮ್ಮ ವಿರೋಧ ಇಲ್ಲ. ಯಾವುದೇ ವಿಚಾರಕ್ಕೆ ನಮ್ಮ ವಿರೋಧ ಇಲ್ಲ. ಜಾತ್ಯಾತೀತೆಯ ಅರ್ಥ ಹಿಂದು ಧರ್ಮಕ್ಕೆ ವಿರೋಧ ಮಾಡು ಎಂಬುವುದಲ್ಲ. ಮೈಸೂರು ದಸರಾ ಉದ್ಘಾಟನೆಯಿಂದ ಬಾನು ಮುಷ್ತಾಕ್ ಅವರನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು. ಟಿಪ್ಪು ಹಾಗೂ ಹೈದರಾಲಿ ದಸರಾ ಆಚರಣೆ ಮಾಡಿರಬಹುದು.
ಆದರೆ, ಅವರು ಎಂದೂ ತಾಯಿ ಚಾಮುಂಡಿಶ್ವೇರಿ ದೇವಿಗೆ ನಮಸ್ಕಾರ ಮಾಡಿಲ್ಲ. ನಾವು ನಾಸ್ತಿಕರನ್ನು ಗೌರವಿಸಿಸುತ್ತೇವೆ, ನಾವು ವೈಚಾರಿಕವಾಗಿ ವಿರೋಧಿಸುತ್ತಿಲ್ಲ. ನಂಬಿಕೆಯೇ ಇಲ್ಲದಾಗ ಹೇಗೆ ಪುಷ್ಪಾರ್ಚನೆ ಮಾಡುತ್ತೀರಿ. ಈ ರಾಜ್ಯದಲ್ಲಿ ಭುವನೇಶ್ವರಿ ದೇವಿಯ ದೇವಸ್ಥಾನ ಇದೆ. ಕುವೆಂಪು ಅವರು ಜಯಹೇ ಕರ್ನಾಟಕ ಮಾತೆ ಅಂತ ಹೇಳಿದರು. ಇಂತಹದ್ದಕ್ಕೆ ಅಪಮಾನ ಮಾಡುವವರು ಚಾಮುಂಡೇಶ್ವರಿ ದೇವಿಗೆ ಅಪಮಾನ ಮಾಡಲ್ಲ ಎಂಬುವುದಕ್ಕೆ ಏನು ಗ್ಯಾರಂಟಿ? ಎಂದು ಪ್ರಶ್ನಿಸಿದರು.