ವಿಜಯಸಾಕ್ಷಿ ಸುದ್ದಿ, ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕೆಲಸ ಮಾಡುತ್ತಿರುವ ರೋಣ ತಾಲೂಕಿನ ಕೂಲಿಕಾರರಿಗೆ ಇ-ಕೆವೈಸಿ (eKYC) ಪ್ರಕ್ರಿಯೆ ಕಡ್ಡಾಯಗೊಳಿಸಲಾಗಿದೆ. ತಾಲೂಕಿನ ಎಲ್ಲಾ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಕರೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಬಂದ ಸೂಚನೆಯಂತೆ, 2025ರ ಸೆಪ್ಟೆಂಬರ್ 30ರೊಳಗೆ ಎನ್ಎಂಎಸ್ (NMMS) (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿದೆ. ಆದರೆ, ರೋಣ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕೂಲಿಕಾರರು ಈ ಪ್ರಕ್ರಿಯೆ ಪೂರ್ಣಗೊಳಿಸದಿರುವುದರಿಂದ, ತಾಲೂಕು ಪಂಚಾಯಿತಿಯ ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಐಇಸಿ ಚಟುವಟಿಕೆಗಳ ಮೂಲಕ ಗ್ರಾಮಸ್ಥರಿಗೆ ಇ-ಕೆವೈಸಿಯ ಮಹತ್ವ ತಿಳಿಸಲಾಗುತ್ತಿದೆ. ಕಾರ್ಮಿಕರು ತಮ್ಮ ಜಾಬ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಹಿತವಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಅಥವಾ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕೂಲಿ ಪಾವತಿಯಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಜೊತೆಗೆ, ಕಾರ್ಮಿಕರ ಹಾಜರಾತಿಯನ್ನು ಮುಖ ಆಧಾರಿತ (face recognition) ತಂತ್ರದ ಮೂಲಕ ಎನ್ಎಂಎಸ್ ಅಪ್ಲಿಕೇಶನ್ನಲ್ಲಿ ನಿಖರವಾಗಿ ದಾಖಲಿಸಬಹುದು. ಇದು ನರೇಗಾ ಯೋಜನೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತೆಯನ್ನು ಹೆಚ್ಚಿಸುತ್ತದೆ. ಸದ್ಯದಲ್ಲೇ ಎನ್ಎಂಎಸ್ ಅಪ್ಲಿಕೇಶನ್ನಲ್ಲಿ ಕಾರ್ಮಿಕರ ಫೋಟೋ ಸೆರೆಹಿಡಿದು, ಆಧಾರ್ ಸಂಖ್ಯೆಯೊಡನೆ ಮುಖ ಹೊಂದಾಣಿಕೆ ಮೂಲಕ ಹಾಜರಾತಿ ದೃಢಪಡಿಸಲಾಗುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಕಾರ್ಮಿಕರ ಹಾಜರಾತಿಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ರೋಣ ತಾಲೂಕಿನ ಒಟ್ಟು 22 ಗ್ರಾಮ ಪಂಚಾಯಿತಿಗಳಲ್ಲಿ 30054 ಕುಟುಂಬಗಳಿದ್ದು, 73585 ನೋಂದಾಯಿತ ಕೂಲಿಕಾರರು ಇದ್ದಾರೆ. ಅದರಲ್ಲಿ 50113 ಸಕ್ರಿಯ ಕೂಲಿಕಾರರು ಇರುತ್ತಾರೆ. ಇವರೆಲ್ಲರೂ ಇ-ಕೆವೈಸಿ ಮಾಡಿಕೊಳ್ಳಲು ತಿಳಿಸಲಾಗಿದೆ. ತಾಲೂಕಿನಲ್ಲಿ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳ ಮೂಲಕ ಕೂಲಿಕಾರರಿಗೆ 100 ದಿನಗಳ ಕನಿಷ್ಠ ಉದ್ಯೋಗ ಒದಗಿಸಲಾಗುತ್ತಿದ್ದು, ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲ ಕಾರ್ಮಿಕರು ತಕ್ಷಣ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಮಾಡಿದ್ದಾರೆ.



