ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ನಗರದ ಗೌಳೇರ ಓಣಿ, ಗೋವೆರಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಗೌಳಿಗರು ಎಮ್ಮೆ ಬೆದರಿಸುವ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಪಾಂಡವರು 14 ವರ್ಷ ವನವಾಸ ಮುಗಿಸಿ ಕೌರವರಿಗೆ ಒಂದು ವರ್ಷ ಸಿಗದಂತೆ ವಿರಾಟರಾಜನ ಅರಮನೆಯಲ್ಲಿ ದಣ ಕಾಯುತ್ತಾ, ಸಗಣಿ ಹೋರುತ್ತಾರೆ. ಇದರ ನೆನಪಿಗಾಗಿ ಗೌಳಿಗರು ಆಚರಿಸುವ ಪಾಂಡವರ ಹಬ್ಬ ದೀಪಾವಳಿಯಲ್ಲಿ ಗಮನ ಸೆಳೆಯುತ್ತದೆ. ಗೌಳಿಗರ ಮನೆಗಳಲ್ಲಿ ದಸರಾ ಹಬ್ಬದ ದಿನ ಅರಿಶಿಣದ ಘಟ ಸ್ಥಾಪಿಸುವ ಮೂಲಕ ಪಾಂಡವರ ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಅಮವಾಸ್ಯೆ ದಿನ ಎಮ್ಮೆಗಳಿಗೆ ಮಜ್ಜನ ಮಾಡಿಸಿ, ಮರುದಿನ ಎಮ್ಮೆಗಳಿಗೆ ಅರಿಶಿಣ, ನವಿಲುಗರಿ, ಕೊರಳ ಗೆಜೆ (ಗೆಜ್ಜೆ) , ಮುತ್ತಿನ ಹಾರ, ಕುಂಕುಮ ಲೇಪಿಸಿದಾಗ ಹಬ್ಬ ರಂಗೇರುತ್ತದೆ.
ಪುರಸಭೆ ಸದಸ್ಯ ಗೌಳಿ ವಿನಯ್ ಕುಮಾರ ಮಾತನಾಡಿ, ನಗರ ಪ್ರದೇಶ ಹಾಗೂ ಗೋವೆರಹಳ್ಳಿಯಲ್ಲಿ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ಗೌಳಿಗರ ನೂರಾರು ಕುಟುಂಬಗಳು ಹಾಲು ಮಾರಿ (ಮಾರುವ) ಜೀವನ ಕಂಡುಕೊಂಡಿದ್ದು, ಸರ್ಕಾರ ಇವರನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.
ವರ್ಷದ 365 ದಿನವೂ ಎಮ್ಮೆಗಳ ಪಾಲನೆ, ಪೋಷಣೆ ಮಾಡಿದ ವ್ಯಕ್ತಿಯನ್ನೇ ಎಮ್ಮೆಗಳು ಹಿಂಬಾಲಿಸುತ್ತವೆ. ಮಧ್ಯೆ ಕೆಲವರು ಪಟಾಕಿ ಸಿಡಿಸುತ್ತಾರೆ. ಇನ್ನೂ ಕೆಲವರು ಮಾಲೀಕನ ಮೇಲಿನ ಎಮ್ಮೆಯ ದೃಷ್ಟಿ ತಪ್ಪಿಸಲು ಆತನನ್ನೇ ಬಚ್ಚಿಡಲು ಮುಂದಾಗುತ್ತಾರೆ, ಆತನ ಶೈಲಿಯಲ್ಲಿಯೇ ಎಮ್ಮೆಯ ಗಮನ ಸೆಳೆಯಲು ಯತ್ನಿಸುತ್ತಾರೆ. ಆದರೆ ಎಮ್ಮೆಗಳು ಮಾತ್ರ ಮಾಲೀಕನ ಕಂಠದಿಂದ ಹೊರ ಹೊಮ್ಮುವ ಧ್ವನಿಯನ್ನೆ ಹಿಂಬಾಲಿಸುತ್ತವೆ.
ಚಿನ್ನಾಭರಣ, ಬಟ್ಟೆ ಅಂಗಡಿಯೊಳಗೆ ಹೋದರೆ, ಎಮ್ಮೆಗಳೂ ಸಹ ಮಾಲಕನನ್ನೇ ಹಿಂಬಾಲಿಸುತ್ತವೆ. ಯಾವುದೇ ಅಪಾಯ ಮಾಡದೇ ಸುರಕ್ಷಿತವಾಗಿ ಹೊರಗಡೆ ಬರುತ್ತವೆ. ಒಂದು ಎಮ್ಮೆಗೆ ಕಣ್ಣಿಗೆ ಬಟ್ಟೆ ಕಟ್ಟುತ್ತಾರೆ, ಮಾಲಕ ದೂರ ನಿಂತು ಚಪ್ಪಾಳೆ ತಟ್ಟಿ, ಕೌ ಎನ್ನುತ್ತಿದ್ದಂತೆ ಎಮ್ಮೆ ಆತನಲ್ಲಿರುವಲ್ಲಿಗೆ ತೆರಳಿ ನೆರೆದವರಿಂದ ಚಪ್ಪಾಳೆ ಗಿಟ್ಟಿಸಿತು.
ಒಬ್ಬ ಯುವಕ ತನ್ನ ಬೈಕ್ ಮೇಲೆ ಮಾಲಕನನ್ನು ಕೂರ್ (ಕೂರಿಸಿ) ಮಾಡಿಕೊಂಡು ಜೋರಾಗಿ ಬೈಕ್ ಓಡಿಸುತ್ತಾನೆ, ಬೈಕ್ ಹಿಂದೆಯೇ ಓಡುವ ಎಮ್ಮೆಗಳು ಮಾಲಕನ ಮೇಲಿನ ಪ್ರೀತಿ ತೋರಿಸುವ ದೃಶ್ಯ ರೋಮಾಂಚನಗೊಳಿಸಿತು. ಹೀಗೆ ವಿಶಿಷ್ಟ ಶೈಲಿಯಲ್ಲಿ ಎಮ್ಮೆಗಳ ಓಡಾಟ ವೀಕ್ಷಿಸಲು ನೂರಾರು ಜನರು ನೆರೆದಿದ್ದರು.
ಹೊಸ ಕಟ್ಟಿಗೆಯ ಎರಡು ತುಂಡುಗಳನ್ನು ತಂದು ಎಮ್ಮೆ ಕಟ್ಟುವ ಕೊಟ್ಟಿಗೆಯಲ್ಲಿ ನೆಟ್ಟು, ಸಗಣಿಯಿಂದ ತಯಾರಿಸಿದ ಪಾಂಡವರ ಘಟದ ಎದುರು ಸ್ಥಾಪಿಸಿದ ಒಲೆಯ ಮೇಲೆ ಹೊಸ ಮಡಕೆಯಲ್ಲಿ ಶಾವಿಗೆ, ಹಾಲು, ತುಪ್ಪ ಹಾಕಿ ಬೇಯಿಸುತ್ತೇವೆ. ಒಲೆಯ ಮೇಲೆ ಹಾಲು ಉಕ್ಕುತ್ತಿದ್ದಂತೆಯೇ ಆ ಬೆಂಕಿಯಲ್ಲಿ ಕಾದು ಕೆಂಡವಾಗಿರುವ ಸಲಾಕೆಯಿಂದ ಎಮ್ಮೆಗಳಿಗೆ ಗುಲ್ (ಮುದ್ರೆ) ಹಾಕುತ್ತೇವೆ. ದಣ ಕಾಯುವ ವ್ಯಕ್ತಿ ಪಾಂಡವರ ಎಡೆಗೆ ಆರತಿ ಬೆಳಗಿದ ಬಳಿಕ ಎಮ್ಮೆ ಬೆದರಿಸಲಾಗುವುದು ಎಂದು ಗೌಳಿಗರ ಹಿರಿಯರಾದ ಸಾವಿತ್ರಮ್ಮ ಹಬ್ಬದ ಆಚರಣೆಯ ಬಗ್ಗೆ ಮಾಹಿತಿ ನೀಡಿದರು.



