ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸಮಾಜದಲ್ಲಿ ಭಿನ್ನಾಭಿಪ್ರಾಯ ಸಹಜ. ಅದೆಲ್ಲವನ್ನೂ ಬಿಟ್ಟು ಸಮಾಜ ಕಟ್ಟುವುದು ಅಗತ್ಯ. ಪಂಚಮಸಾಲಿ ಸಮಾಜವನ್ನು ಸದೃಢವಾಗಿ ಕಟ್ಟಬೇಕು. ಸಮಾಜವನ್ನು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತಷ್ಟು ಮುನ್ನೆಲೆಗೆ ತರುವಂತಹ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಎಂದು ಮಾಜಿ ಸಚಿವ, ಹಾಲಿ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಶುಕ್ರವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಬೃಹತ್ ಸಮಾವೇಶ, ಕಿತ್ತೂರ ರಾಣಿ ಚೆನ್ನಮ್ಮರ 201ನೇ ವಿಜಯೋತ್ಸವ ಹಾಗೂ 247ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2ಎ ಮೀಸಲಾತಿ ಹೋರಾಟ ನಿಲ್ಲಬಾರದು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಈಗಾಗಲೇ ಶ್ರೀಗಳ ನೇತೃತ್ವದಲ್ಲಿ ಹೋರಾಟಗಳು ನಡೆದಿವೆ. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಒದಗಿಸಬೇಕು. ಪಂಚಮಸಾಲಿ ಸಮಾಜ ಯಾರಿಗೂ, ಎಂದಿಗೂ ಕೇಡು ಬಯಸಿದ ಸಮಾಜವಲ್ಲ. ಸಮಾಜದ ಬಲವರ್ಧನೆಗೆ ಗುರು, ಹಿರಿಯರ ಆಶೀರ್ವಾದ ಮುಖ್ಯ. ಕಿತ್ತೂರ ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ. ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರ ರಾಣಿ ಚೆನ್ನಮ್ಮನ ಧೈರ್ಯ, ಸಾಹಸ ಎಲ್ಲರಿಗೂ ಸ್ಪೂರ್ತಿ. ಚೆನ್ನಮ್ಮ ಸ್ವಾಭಿಮಾನದ ಸಂಕೇತ. ಸ್ವಾಭಿಮಾನ ಬಿಟ್ಟುಕೊಡದೇ ಬ್ರಿಟಿಷ್ ಸರ್ಕಾರದ ವಿರುದ್ಧ ಸಿಡಿದೆದ್ದು ನಿಂತ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ ಹೋರಾಟ ಎಲ್ಲರಿಗೂ ಸ್ಪೂರ್ತಿಯಾಗಿದೆ. ಪಟ್ಟಣದಲ್ಲಿ ನಿರ್ಮಿಸಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತಕ್ಕೆ ಒಂದು ಲಕ್ಷ ರೂ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು ಮ್ಯಾಗೇರಿ ಓಣಿಯಿಂದ ಅಶ್ವಾರೂಢಳಾದ ಕಿತ್ತೂರು ಚೆನ್ನಮ್ಮನ ಮೂರ್ತಿಯ ಭವ್ಯ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ನಡೆಯಿತು. ಶಿರಹಟ್ಟಿಯ ಜ.ಫ. ಸಿದ್ದರಾಮ ಶ್ರೀಗಳು ಆಶೀರ್ವಚನ ನೀಡಿದರು. ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ತುಳಿ ಪ್ರಾಸ್ತಾವಿಕ ಮಾತನಾಡಿದರು. ಸೋಮನಗೌಡ ಮಾಲಿಪಾಟೀಲ, ಅಶೋಕ ಪಲ್ಲೇದ, ವಿ.ವಿ. ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ಡಾ. ಪ್ರಕಾಶ ಹೊಸಮನಿ, ಸಿ.ಸಿ. ನೂರಶೆಟ್ಟರ, ಸೋಮಣ್ಣ ಡಾಣಗಲ್ಲ, ಈರಣ್ಣ ಕರಿಬಿಷ್ಠಿ, ಎಸ್.ವಿ. ಪಲ್ಲೇದ, ಶರಣು ಪಾಟೀಲ, ವೀರನಗೌಡ ಪಾಟೀಲ, ಎಸ್.ಬಿ. ಹೊಸೂರ, ಯಲ್ಲಪ್ಪ ಇಂಗಳಗಿ, ಬಸವರಾಜ ಚಿಕ್ಕತೋಟದ, ಬಸವರಾಜ ವಡವಿ, ಮುತ್ತು ಭಾವಿಮನಿ, ಸಂದೀಪ ಕಪ್ಪತ್ತನವರ, ತಿಮ್ಮರಡ್ಡಿ ಮರಡ್ಡಿ, ಕರಬಸಪ್ಪ ಹಂಚನಾಳ, ಎಂ.ಪಿ. ಹಣಜಿ, ಮಂಜುನಾಥ ಮಗಡಿ, ಬಸವಣ್ಣೆಪ್ಪ ತುಳಿ ಮುಂತಾದವರು ಉಪಸ್ಥಿತರಿದ್ದರು.
ಬಾಕ್ಸ್
ಹರಿಹರ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ಕೂಡಲಸಂಗಮ ಮತ್ತು ಹರಿಹರ ಪೀಠದ ಜಗದ್ಗುರುಗಳು ಒಂದಾಗಿದ್ದೇವೆ. ಪಂಚಮಸಾಲಿ ಸಮಾಜದವರು ದ್ವೇಷ ಬಿಟ್ಟು ಪ್ರೀತಿಯಿಂದ ಸಮಾಜ ಸಂಘಟನೆಗೆ ಮುಂದಾಗಬೇಕು. ಸ್ತ್ರೀಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಬಹುದು ಎಂಬುದಕ್ಕೆ ಚೆನ್ನಮ್ಮನೇ ಪ್ರೇರಣೆ, ಹೀಗಾಗಿ ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ ಎಂದರು.


