ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ರಾಜಕೀಯದ ಏಳು-ಬೀಳಿನ ಮೇಲಾಟದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಏಳೂವರೆ ವರ್ಷಗಳಷ್ಟು ದೀರ್ಘಾವಧಿಗೆ ಕೇವಲ ಇಬ್ಬರು ಪೂರ್ಣಾವಧಿ ಮುಖ್ಯಮಂತ್ರಿಗಳು ಆಡಳಿತ ನಡೆಸಲು ಅವಕಾಶ ನೀಡಿದೆ. ಅವರಲ್ಲಿ ಒಬ್ಬರು ಹಿಂದುಳಿದ ಸಮುದಾಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಡಿ.ದೇವರಾಜ ಅರಸುರವರಾದರೆ, ಇನ್ನೊಬ್ಬರು ಪ್ರಸ್ತುತ ಮುಖ್ಯಮಂತ್ರಿಗಳಾಗಿ 2792 ದಿನಗಳನ್ನು ದಾಟಿ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ದಾಖಲಾರ್ಹ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯನವರಾಗಿದ್ದಾರೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಚಾಲಕ ಕೆ.ಬಿ. ಕಂಬಳಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ದೀರ್ಘಾವಧಿ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ನಗರದ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡ 1755ನೇ ದಿನದ ಪ್ರಸಾದ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ನೇಹ-ಸಂಬಂಧಗಳಿಗೆ, ಪ್ರೀತಿ ವಾತ್ಸಲ್ಯಗಳಿಗೆ ಸೋಲುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲವರ ದೃಷ್ಟಿಯಲ್ಲಿ ಹಠಮಾರಿ, ಒರಟರಂತೆ ಕಂಡರೂ ಕೂಡ ಅವರನ್ನು ಹತ್ತಿರದಿಂದ ಬಲ್ಲವರು ಅವರ ನಿಷ್ಕಲ್ಮಷ, ನಿಷ್ಕಪಟ ನುಡಿಗಳನ್ನು ಮೆಚ್ಚಿಕೊಳ್ಳುತ್ತಾರೆ. ಇದರಿಂದಾಗಿ ಅವರ ಸ್ನೇಹ ಬಳಗ ಮತ್ತು ಅಭಿಮಾನಿ ಸಂಘಟನೆಗಳು ಅವರ ಬೆನ್ನಿಗೆ ಗಟ್ಟಿಯಾಗಿ ನಿಂತಿವೆ. ರಾಜಕೀಯವಾಗಿ ಅವರನ್ನು ಟೀಕಿಸುವ ವಿರೋಧಿಗಳು ಕೂಡ ವ್ಯಕ್ತಿಗತವಾಗಿ ಅವರನ್ನು ಗೌರವಿಸುತ್ತಾರೆ ಎಂದು ಹೇಳಿದರು.
ಪ್ರೊ. ಮಾರುತಿ ಮಡ್ಡಿ ಮಾತನಾಡಿ, ಸಿದ್ದರಾಮಯ್ಯನವರು ಆರ್ಥಿಕವಾಗಿಯೂ ಸದೃಢವಿಲ್ಲದ, ಸಾಂಪ್ರದಾಯಿಕ ಶಿಕ್ಷಣವನ್ನು ಪ್ರಾರಂಭದಲ್ಲಿ ಸರಿಯಾಗಿ ಪಡೆಯಲಾಗದ, ಹಿಂದುಳಿದ ಸಮುದಾಯದ, ಸೌಲಭ್ಯಗಳಿಲ್ಲದ ಕುಗ್ರಾಮದಲ್ಲಿ ಜನಿಸಿ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ರಾಜಕೀಯದಲ್ಲಿ ಬೆಳೆದುಬಂದ ರೀತಿ ಅತ್ಯಂತ ರೋಚಕ ಮತ್ತು ರೋಮಾಂಚನಕಾರಿಯಾಗಿದೆ. ಅಂದಿನ ರಾಮಕೃಷ್ಣ ಹೆಗಡೆಯವರ ಸರಕಾರದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ನಂತರ ರೇಷ್ಮೆ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಮತ್ತೆ 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ಎಸ್.ಆರ್. ಬೊಮ್ಮಾಯಿ ಸರಕಾರದಲ್ಲಿ ಸಾರಿಗೆ ಮಂತ್ರಿಗಳಾದರು ಎಂದರು.
ಈ ಸಂದರ್ಭದಲ್ಲಿ ಎಸ್.ಆರ್. ರೊಳ್ಳಿ, ನಿವೃತ್ತ ಶಿಕ್ಷಕ ಎಸ್.ಎಸ್. ಕರಡಿ, ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ಗೌರವಾಧ್ಯಕ್ಷರಾದ ಎಸ್.ಎಸ್. ಕಳಸಾಪೂರಶೆಟ್ಟರ್, ಉಪಾಧ್ಯಕ್ಷರಾದ ಉಮೇಶ ಪೂಜಾರ, ಸದಸ್ಯರಾದ ರಾಜಣ್ಣ ಮಲ್ಲಾಡದ, ಮುತ್ತು ಜಡಿ, ಹಿರಿಯರಾದ ಗುರುಮೂರ್ತಿ ಮರಿಗುದ್ದಿ, ಸಿದ್ದರಾಮಯ್ಯ ಅಭಿಮಾನಿ ಬಳಗದವರಾದ ವಿ.ವೈ. ಮಕ್ಕಣ್ಣವರ, ನಾಗಪ್ಪ ಗುಗ್ಗರಿ, ಡಾ. ಎಸ್.ಎ. ಜಕಬಾಳ, ಡಾ. ಶರಣಬಸವ ವೆಂಕಟಾಪೂರ, ಪ್ರೊ. ಬಿ.ಎಸ್. ಕಂಠಿ, ಪ್ರೊ. ಎಂ.ಸಿ. ವಗ್ಗಿ, ಚೆನ್ನಮ್ಮ ಹುಳಕಣ್ಣವರ, ಹುಚ್ಚಣ್ಣ ಶಹಪೂರ, ಬಿ.ಬಿ. ಭಾವಿಕಟ್ಟಿ, ಎಸ್.ಎಸ್. ಕರಡಿ, ಉಮೇಶ ಹಡಪದ, ಸುಭಾಷ ಪರಸನಾಯ್ಕರ್, ಶಿವಣ್ಣ ಶಿಂಗಟಾಲಕೇರಿ, ಯಲ್ಲಪ್ಪ ಗುರಿಕಾರ, ಬಸವರಾಜ ಮಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಕ ಸಚಿವ ಸಂಪುಟ ನಡೆಸಿ ಅನ್ನಭಾಗ್ಯ, ಕ್ಷೀರಭಾಗ್ಯ, ವಸತಿ ಭಾಗ್ಯದಂತಹ ಜನಪರ ಯೋಜನೆಗಳನ್ನು ಘೋಷಣೆ ಮಾಡಿದರು. ಮುಖ್ಯವಾಗಿ ಹಿಂದುಳಿದವರ, ಅಲ್ಪಸಂಖ್ಯಾತರ, ರೈತರ ಸಾಲ ಮನ್ನಾ ಮಾಡಿದರು. ರಾಜ್ಯದ 22ನೇ ಮುಖ್ಯಮಂತ್ರಿಯಾದ ನಂತರ ಪಂಚ ಗ್ಯಾರಂಟಿ ಯೋಜನೆಗಳಿಂದ ವಿಶ್ವದಾದ್ಯಂತ ಪ್ರಸಿದ್ಧಿಯಾದರು. ಬಡವರ ಪರ ಯೋಚಿಸುವ ಅವರೊಬ್ಬ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಪ್ರೊ. ಮಾರುತಿ ಮಡ್ಡಿ ಮಾತನಾಡಿ ಹೇಳಿದರು.



