ವಿಜಯಸಾಕ್ಷಿ ಸುದ್ದಿ, ಗದಗ: ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಕುರುಬ ಸಮಾಜದ ರಿತ್ತಿ ಕುಟುಂಬಕ್ಕೆ ಆಕಸ್ಮಿಕವಾಗಿ ದೊರೆತ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ ಹಾಗೂ ಕುಟುಂಬದವರನ್ನು ಕಂಬಳಿ ಹೊದೆಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುರುಬ ಸಮಾಜದ ಮುಖಂಡ ರಮೇಶ್ ಎನ್.ಸಜ್ಜಗಾರ, ಹಾಲುಮತ ಸಮಾಜಕ್ಕೆ ಭಾರತದಲ್ಲಿ ತನ್ನದೇ ಆದ ವಿಶೇಷತೆಯಿದೆ. ಹಿಂದಿನ ಕಾಲದಿಂದಲೂ ಕುರುಬರು ಕಂಬಳಿ ಬೀಸಿದರೆ ಮಳೆರಾಯ ಧರೆಗೆ ಬರುವನು ಎಂಬ ಪ್ರತೀತಿ ಇದೆ. ಇದೆಲ್ಲಕ್ಕೂ ನಿದರ್ಶನವಾದದ್ದು ಲಕ್ಕುಂಡಿ ಗ್ರಾಮದ ಕುರುಬ ಸಮಾಜದ ಕಡು ಬಡತನದಲ್ಲಿರುವ ಕುಟುಂಬದವರಿಗೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದು, ರಿತ್ತಿ ಕುಟುಂಬದ ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆ ಶ್ಲಾಘನೀಯ ಎಂದರು.
ಪ್ರಾಮಾಣಿಕತೆ ಮೆರೆದ ಕುಟುಂಬವನ್ನು ದೆಹಲಿಗೆ ಕರೆಸಿ ಗೌರವಿಸಿ ಸಮಾಜಕ್ಕೆ ಪ್ರೇರಣಾ ಸಂದೇಶ ನೀಡಲು ಇದಕ್ಕೆ ಸಹಕಾರವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಇವರಿಗೆ ಈ ಸಂದರ್ಭದಲ್ಲಿ ಕುರುಬ ಸಮಾಜದ ಪರವಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಶಿವು ಡಂಬಳ, ಜಯಕುಮಾರ ಉಮಚಗಿ, ಚಂದ್ರಹಾಸ್ ಕಟ್ಟಿಗಾರ ಹಾಗೂ ಲಕ್ಕುಂಡಿ ಗ್ರಾಮಸ್ಥರು ಉಪಸ್ಥಿತರಿದ್ದರು.



