ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ಬೆಟಗೇರಿ ಅವಳಿ ನಗರದಲ್ಲಿನ ಮೂತ್ರಾಲಯಗಳ ಸಮಸ್ಯೆ ನಿವಾರಿಸಲು ವಿಫಲವಾಗಿರುವ ನಗರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ಶ್ರೀರಾಮಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆಯಂತಹ ವಿನೂತನ ಪ್ರತಿಭಟನೆ ನಡೆಸಿದ್ದರು.
ಅದರಲ್ಲಿ ಓರ್ವ ಶ್ರೀರಾಮಸೇನೆ ಕಾರ್ಯಕರ್ತನೊಬ್ಬ ನಗರಸಭೆ ಕಾರಿಡಾರ್ ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಇದರ ಬೆನ್ನಲ್ಲೇ ಈಗ ದಲಿತ ಸಂಘಟನೆಗಳ ಒಕ್ಕೂಟವು ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಶ್ರೀರಾಮ ಸಂಘಟನೆ ವತಿಯಿಂದ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರ ಕಛೇರಿ ಮುಂದೆ ಮೂತ್ರ ವಿಸರ್ಜನೆ ಮಾಡಿರುವುದು ಖಂಡನಾರ್ಹವಾಗಿದ್ದು, ಘಟನೆಯಿಂದ ನಗರಸಭೆ ತಲೆ ತಗ್ಗಿಸುವಂತಾಗಿದೆ. ಈ ಘಟನೆ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಹಾಗೂ ದಲಿತ ಸಮುದಾಯವನ್ನು ಅವಮಾನಿಸಿದಂತಾಗಿದೆ.
ಇದನ್ನೂ ಓದಿ ಶೇಮ್ ಶೇಮ್ : ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತ
ನಗರಸಭೆ ಕಚೇರಿಯನ್ನು ಸ್ವಚ್ಛಗೊಳಿಸುವವರು ಇಲ್ಲಿನ ಪೌರಕಾರ್ಮಿಕರೇ ವಿನಃ ಅಧಿಕಾರಿ ವರ್ಗವಲ್ಲ. ಈ ರೀತಿ ಉದ್ಧಟನ ತೋರಿದ ಶ್ರೀರಾಮಸೇನೆ ಸಂಘಟನೆಯ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಎಸ್ಸಿ/ಎಸ್ಟಿ ಕಾಯ್ದೆ ಅನುಸಾರವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೇ, ಸರ್ಕಾರಿ ಕಛೇರಿಗಳಲ್ಲಿ ಈ ರೀತಿ ಮೂತ್ರ ವಿಸರ್ಜನೆಗೆ ಯಾವುದೇ ಅವಕಾಶವಿಲ್ಲ. ಹೀಗಾಗಿ ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಮನವಿಯಲ್ಲಿ ಉಲ್ಲೇಖಿಸಿದೆ.
ಈ ಸಂದಂರ್ಭದಲ್ಲಿ ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ, ಆನಂದ ಸಿಂಗಾಡಿ, ಯಲ್ಲಪ್ಪ ರಾಮಗಿರಿ, ರಮೇಶ ಕೋಳೂರ, ಶಿವಾನಂದ ತಮ್ಮಣ್ಣವರ, ಅನೀಲ ಕಾಳೆ, ಪರಶು ಕಾಳೆ, ಬಸೂ ಬಿಳೆಯಲಿ, ಮಂಜು ದೊಡ್ಡಮನಿ ಸೇರಿದಂತೆ ಇನ್ನಿತರರು ಇದ್ದರು.