ಗದಗ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರದ ಕೊರತೆ ಗಂಭೀರ ಸ್ವರೂಪ ಪಡೆದಿದೆ. ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ಅಂಗನವಾಡಿಗಳಲ್ಲಿ ಜನವರಿ ತಿಂಗಳ ಮೊಟ್ಟೆ ಹಣ ಫೆಬ್ರವರಿ 11ರವರೆಗೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮಕ್ಕಳಿಗೆ ಸರಿಯಾದ ಆಹಾರ ಸಿಗದೆ ಸಂಕಷ್ಟ ಎದುರಾಗಿದೆ.
ಗ್ರಾಮಸ್ಥರ ಆರೋಪದಂತೆ, ಅನುದಾನ ವಿಳಂಬದಿಂದಾಗಿ ಒಂದು ಮೊಟ್ಟೆಯನ್ನು ಮೂವರು ಮಕ್ಕಳಿಗೆ ಹಂಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರದ ಪೌಷ್ಟಿಕಾಹಾರ ಯೋಜನೆಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎತ್ತಿದೆ. ಮಕ್ಕಳಿಗೆ ನೀಡಬೇಕಾದ ಹಾಲಿನ ಪೂರೈಕೆ ಕೂಡ ಅಸಮರ್ಪಕವಾಗಿದೆ ಎಂದು ಹೇಳಲಾಗಿದೆ.
ಇದರ ಜೊತೆಗೆ, ಅಂಗನವಾಡಿಗಳಿಗೆ ಪೂರೈಕೆಯಾಗುವ ಗೋಧಿಯಲ್ಲಿ ನುಸಿಗಳು ಪತ್ತೆಯಾಗಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆ. ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳು ಕಾಗದದಲ್ಲೇ ಸೀಮಿತವಾಗಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಅನುದಾನ ಬಿಡುಗಡೆ ಮಾಡಿ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಅನುದಾನ ಬಿಡುಗಡೆ ಆಗದೆ ಇರುವುದೇ ಸಮಸ್ಯೆಯೋ, ಅಥವಾ ಬಿಡುಗಡೆಯಾದ ಹಣ ಅಂಗನವಾಡಿಗಳಿಗೆ ತಲುಪದೇ ಮಧ್ಯದಲ್ಲಿ ಅಡಕವಾಗುತ್ತಿದೆಯೋ ಎಂಬ ಅನುಮಾನವೂ ವ್ಯಕ್ತವಾಗಿದೆ.



