ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸರಕಾರದ ನಿರ್ದೇಶನದಂತೆ ಮುಂದಿನ ದಿನಮಾನಗಳಲ್ಲಿ ಕಾಗದ ರಹಿತ ನೋಂದಣಿ ವ್ಯವಸ್ಥೆ ಜಾರಿಯಾಗಲಿದ್ದು, ಇದರ ಕುರಿತು ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳಲ್ಲಿಯೂ ಸಹ ಕಾರ್ಯಾಗಾರಗಳು ಹಂತ ಹಂತವಾಗಿ ನಡೆಯುತ್ತಿವೆ ಎಂದು ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ ತಿಳಿಸಿದರು.
ಬುಧವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಸರಕಾರದ ನಿರ್ದೇಶನದಂತೆ ಆಯೋಜಿಸಿದ್ದ ಪೇಪರ್ಲೆಸ್ ನೋಂದಣಿ ವ್ಯವಸ್ಥೆ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೇಪರ್ಲೆಸ್ ವ್ಯವಸ್ಥೆಯಿಂದ ದಸ್ತಾವೇಜಿಗೆ ವಿಶಿಷ್ಟ ಸಂಖ್ಯೆ ಸಿಗಲಿದ್ದು, ದಾಖಲೆ ತಿರುಚಿ ಬೇರೆಯವರಿಗೆ ಮಾರಾಟ ಮಾಡುವದಕ್ಕೆ ಕಡಿವಾಣ, ಭೌತಿಕ ದಾಖಲೆ ಇಲ್ಲದೇ ಇರುವುದರಿಂದ ಕಾಗದ ಸಂಗ್ರಹಿಸುವ ತಂಟೆ ಇಲ್ಲ. ಎಲ್ಲಿ ಬೇಕಾದರೂ ತಮ್ಮ ನೋಂದಣಿಯಾದ ದಾಖಲೆ ಡೌನ್ಲೋಡ್ ಮಾಡಿಕೊಳ್ಳಬಹುದು. ಸುರಕ್ಷಿತ ಸಂಗ್ರಹಣೆ ಮತ್ತು ದೀರ್ಘಕಾಲೀನ ದಾಖಲೆಗಳನ್ನು ಸಂರಕ್ಷಿಸಬಹುದಾಗಿದೆ. ಕಾಗದ ರಹಿತ ಮತ್ತು ಪರಿಸರ ಸ್ನೇಹಿ, ದಾಖಲೆಗಳ ಸುಲಭ ಪರಿಶೀಲನೆ ಮತ್ತು ಡಿಜಿಟಲ್ ಆಡಳಿತಕ್ಕೆ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದರು.
ಪೇಪರ್ಲೆಸ್ ನೋಂದಣಿ ವ್ಯವಸ್ಥೆ ಕುರಿತು ನಡೆಯುತ್ತಿದ್ದ ಕಾರ್ಯಾಗಾರವನ್ನು ದಸ್ತು ಬರಹಗಾರರು ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು. ಉಪನೋಂದಣಾಧಿಕಾರಿ ಶರಣಪ್ಪ ಪವಾರ, ಜಿಲ್ಲಾ ಐಟಿ ಕನ್ಸಲ್ಟಂಟ್ ಕುನಾಲ್ ಕಾರಭಾರಿ, ಶ್ರೀನಿವಾಸ ಬೆಟಗೇರಿ, ತಾಲೂಕಾ ದಸ್ತು ಬರಹಗಾರರ ಸಂಘದ ಅಧ್ಯಕ್ಷ ಅಶೋಕ ಹುಬ್ಬಳ್ಳಿ, ಶಂಕರ ಕುಸ್ಲಾಪೂರ, ಎಸ್.ವಿ. ದಶಮನಿ, ಮೈನುದ್ದೀನ ಅತ್ತಾರ, ಮಂಜುನಾಥ ಮೆಣನಸಿನಕಾಯಿ, ಮಹಾದೇವಪ್ಪ ಹೊಂಬಾಳಿ, ಪದ್ಮಾವತಿ ಹುಬ್ಬಳ್ಳಿ, ಬಾಬಾಜಾನ್ ಕೋಳಿವಾಡ, ಮಹಾಂತೇಶ ದಶಮನಿ, ಪ್ರವೀಣ ಹುಬ್ಬಳ್ಳಿ, ಚನ್ನಪ್ಪ ಕುರಿ, ಉಮೇಶ ಶೇಳಕೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ದಸ್ತು ಬರಹಗಾರರ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನಜೀರ ಡಂಬಳ, ಪೇಪರ್ಲೆಸ್ ವ್ಯವಸ್ಥೆ ಜಾರಿ ಮಾಡುವುದರಿಂದ ಅನಕ್ಷರಸ್ಥರಿಗೆ ಮಾರಕವಾಗಲಿದೆ. ರಾಜ್ಯ ಸಂಘದ ನಿರ್ದೇಶನದಂತೆ ಈ ವ್ಯವಸ್ಥೆಯನ್ನು ಧಿಕ್ಕರಿಸಿ ಸಭೆಯಿಂದ ಹೊರನಡೆಯುತ್ತಿದ್ದೇವೆ. ಒಂದು ಸಾರಿ ಓಟಿಪಿ ತೆಗೆದುಕೊಳ್ಳಲಿಕ್ಕೆ ಹರಸಾಹಸ ಮಾಡಬೇಕಾದ ಸ್ಥಿತಿ ಇರುವಾಗ ಪೇಪರ್ಲೆಸ್ನಿಂದ 3-4 ಬಾರಿ ಓಟಿಪಿ ತೆಗೆದುಕೊಳ್ಳಲು ಕಷ್ಟಸಾಧ್ಯವಾಗಲಿದೆ. ಈ ವ್ಯವಸ್ಥೆ ಕುರಿತು ನಮ್ಮ ಬೇಡಿಕೆಯನ್ನು ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರೂ ಸಹಿತ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಎಂದರು.



