ಬಾಗಲಕೋಟೆ: ಕಲ್ಲು ತೂರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾದ 8 ಜನರಲ್ಲಿ 7 ಮಂದಿ ಅಮಾಯಕರಾಗಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಸ್ಲಿಂ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಶುಕ್ರವಾರ ನಡೆದ ಶಾಂತಿ ಸಭೆಗೆ ಮುಸ್ಲಿಂ ಸಮುದಾಯ ಗೈರಾಗಿದ್ದ ಹಿನ್ನೆಲೆಯಲ್ಲಿ, ಇಂದು ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ನೇತೃತ್ವದಲ್ಲಿ ಮರು ಶಾಂತಿ ಸಭೆ ಆಯೋಜಿಸಲಾಯಿತು. ಆದರೆ ಈ ಬಾರಿ ಹಿಂದೂ ಮುಖಂಡರು ಸಭೆಗೆ ಹಾಜರಾಗಲಿಲ್ಲ.
ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಮಾತ್ರ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಚಿವರಿಗೆ ಮೌಖಿಕವಾಗಿ ಸಲ್ಲಿಸಿದರು. ಬಂಧಿತರಲ್ಲಿ ಒಬ್ಬ ಮಾತ್ರ ನಿಜವಾದ ಆರೋಪಿ, ಉಳಿದ 7 ಮಂದಿ ನಿರಪರಾಧಿಗಳು ಎಂದು ಅವರು ವಾದಿಸಿದರು.
ಸಭೆಯ ಬಳಿಕ ಮಾತನಾಡಿದ ಆರ್.ಬಿ. ತಿಮ್ಮಾಪೂರ, “ಜಿಲ್ಲೆಯ ಎಲ್ಲಾ ಸಮುದಾಯದ ಜನರು ಶಾಂತಿ ಮತ್ತು ಸಂಯಮ ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು,” ಎಂದು ಕರೆ ನೀಡಿದರು.
ಪ್ರಕರಣದ ಸುತ್ತ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆ ಗಟ್ಟಿಯಾಗಿದ್ದು, ಬಂಧಿತರ ಬಿಡುಗಡೆ ವಿಚಾರ ಇದೀಗ ಜಿಲ್ಲಾಡಳಿತದ ತೀರ್ಮಾನಕ್ಕೆ ಕಾಯುತ್ತಿದೆ.



