ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸನಾತನ ಹಿಂದೂ ಧರ್ಮದ ವಿರುದ್ಧ ಹುನ್ನಾರ ನಡೆಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ತಕ್ಕ ಸಂದೇಶ ನೀಡುವ ಉದ್ದೇಶದಿಂದ ಮೇ 31ರಂದು ಗದಗದಲ್ಲಿ ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ಶಿರಹಟ್ಟಿಯ ಟೀಚರ್ ಸೊಸೈಟಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೂ ಸರ್ವ ಸಮಾಜಗಳ ಒಕ್ಕೂಟದ ವತಿಯಿಂದ ಬಸವಾದಿ ಶಿವಶರಣರ ನೇತೃತ್ವದಲ್ಲಿ ಈ ಮಹಾಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.
ಗದಗ ನಗರದ ವಿಡಿಎಸ್ಟಿಸಿ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಲಿದ್ದಾರೆ. ಸಾವಯವ ಕೃಷಿ ಕುರಿತಂತೆ ರೈತರಿಗೆ ತಜ್ಞರಿಂದ ಮಾರ್ಗದರ್ಶನವೂ ಇರಲಿದ್ದು, ಜಿಲ್ಲೆಯ ರೈತರು ಹಾಗೂ ಹಿಂದೂ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಂಘಟನೆಯ ಮುಖಂಡ ಸಂತೋಷ ಕುರಿ ಮಾತನಾಡಿ, ಮೇ ೩೧ರಂದು ಮಧ್ಯಾಹ್ನ ೩.೩೦ಕ್ಕೆ ಭೂಮರಡ್ಡಿ ಸರ್ಕಲ್ನಿಂದ ಕುಂಭ ಮೆರವಣಿಗೆ ಆರಂಭವಾಗಲಿದ್ದು, ಎರಡು ರಿಂದ ಮೂರು ಸಾವಿರ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ ೫.೩೦ಕ್ಕೆ ವಿಡಿಎಸ್ಟಿ ಮೈದಾನದಲ್ಲಿ ಬೃಹತ್ ಸಮಾವೇಶವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
ಈ ಮಹಾಸಭೆಯಲ್ಲಿ ೨೫ರಿಂದ ೩೦ ಸಾವಿರ ಜನ ಭಾಗವಹಿಸುವ ಸಾಧ್ಯತೆ ಇದ್ದು, ೩೦೦ಕ್ಕೂ ಹೆಚ್ಚು ಮಠಗಳ ಮಠಾಧೀಶರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಶ್ರೀಧರ್ ಕುಲಕರ್ಣಿ, ರಾಜೀವರಡ್ಡಿ ಬಮ್ಮನಕಟ್ಟಿ, ವೆಂಕಟೇಶ್ ಕುಲಕರ್ಣಿ, ತಿಪ್ಪಣ್ಣ ಕೊಂಚಗೇರಿ, ಯಲ್ಲಪ್ಪಗೌಡ ಅಣ್ಣಿಗೇರಿ, ರಾಮಣ್ಣ ಕಂಬಳಿ, ಬಸವರಾಜ ತುಳಿ, ಗೂಳಪ್ಪ ಕರಿಗಾರ, ಪರಶುರಾಮ ಡೊಂಕಬಳ್ಳಿ, ನೀಲಪ್ಪ ಖಾನಾಪುರ, ನಾಗರಾಜ ಇಂಗಳಗಿ, ಫಕೀರೇಶ ಕರಿಗಾರ, ಸಂತೋಷ ಸೊಂಟನೂರ, ವಿರುಪಾಕ್ಷಿ ಹಿರೇಮಠ, ದೇವು ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಹಿಂದೂ ಸಮಾಜದ ಐಕ್ಯತೆ ಮತ್ತು ಜಾಗೃತಿಯೇ ಸಮಾವೇಶದ ಪ್ರಮುಖ ಉದ್ದೇಶ.”ರಾಜು ಖಾನಪ್ಪನವರ



