ಭೋಪಾಲ್: ಮಾಜಿ ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಸಿಬಿಐ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಎರಡನೇ ಆರೋಪಿಯಾಗಿರುವ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಹೈಕೋರ್ಟ್ ಜಾಮೀನು ರದ್ದುಪಡಿಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನ ನಡೆದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಸಿಬಿಐ ಮೂಲಗಳ ಪ್ರಕಾರ, ತ್ವಿಶಾ ಸಾವಿನ ಹಿಂದೆ ಸಾಮಾನ್ಯ ಆತ್ಮಹತ್ಯೆಗಿಂತಲೂ ಗಂಭೀರ ಸಂಗತಿಗಳಿರುವ ಶಂಕೆ ಬಲವಾಗುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಮೇಲೆ ಪತ್ತೆಯಾದ ಗಾಯಗಳು ಹಾಗೂ ಗರ್ಭಪಾತ ಸಂಬಂಧದ ಒತ್ತಡದ ಆರೋಪಗಳು ತನಿಖೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ.
ಮದುವೆಯಾದ ಕೆಲವೇ ತಿಂಗಳಲ್ಲಿ ತ್ವಿಶಾ ಗರ್ಭಿಣಿಯಾಗಿದ್ದು, ಬಳಿಕ ನಡೆದ ಗರ್ಭಪಾತದ ಹಿಂದೆ ಕುಟುಂಬದ ಒತ್ತಡವಿತ್ತು ಎಂಬ ಆರೋಪ ಕೇಳಿಬಂದಿದೆ. ಪತಿ ಮಗುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾನೆ ಎನ್ನಲಾದ ಚಾಟ್ಗಳು ಹಾಗೂ ಗರ್ಭಪಾತಕ್ಕೆ ಒತ್ತಾಯಿಸಿದ್ದ ಆರೋಪದ ವಾಟ್ಸಾಪ್ ಸಾಕ್ಷ್ಯಗಳು ಈಗ ಸಿಬಿಐ ತನಿಖೆಯ ಪ್ರಮುಖ ಅಂಶಗಳಾಗಿವೆ.
ಇದಕ್ಕೂ ಮೊದಲು ಪ್ರಕರಣದ ಮೊದಲ ಆರೋಪಿ ಸಮರ್ಥ್ ಸಿಂಗ್ 10 ದಿನ ತಲೆಮರೆಸಿಕೊಂಡ ಬಳಿಕ ಬಂಧನಕ್ಕೊಳಗಾಗಿದ್ದರು. ಈಗ ಅತ್ತೆಯ ಬಂಧನದೊಂದಿಗೆ ಪ್ರಕರಣ ಮತ್ತಷ್ಟು ಹೈಪ್ರೊಫೈಲ್ ಸ್ವರೂಪ ಪಡೆದುಕೊಂಡಿದೆ.
ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳು ಇದೀಗ ಕುಟುಂಬದ ಆರ್ಥಿಕ ವ್ಯವಹಾರಗಳು, ವರದಕ್ಷಿಣೆ ಆರೋಪಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ಮೇಲೆ ಫೋಕಸ್ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಕಿಂಗ್ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.



