ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳು ಮತ್ತಷ್ಟು ಸಬಲೀಕರಣಗೊಳ್ಳಬೇಕಾದರೆ ಸಮುದಾಯ, ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಹಿರಿಯ ಕರ ಸಲಹೆಗಾರ ಮುಕುಂದ ಪೋತ್ನೀಸ್ ಹೇಳಿದರು.
ನಗರದ ಶತಮಾನೋತ್ಸವದ ಹೆಗ್ಗಳಿಕೆಯ ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಪ್ರಗತಿಗೆ ಸಮಾಜದ ಎಲ್ಲ ವರ್ಗದವರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರಷ್ಟೇ ಅಲ್ಲ, ದಾನಿಗಳ ಸಹಕಾರವೂ ಮಹತ್ವದ್ದಾಗಿದೆ. ಎಂ.ಜಿ. ಕವಾಡ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಮುಲ್ತಾನಮಲಜಿ ಗುಮಾನಮಲಜಿ ಕವಾಡ ಅವರ ಸ್ಮರಣಾರ್ಥ ಕೈಗೊಂಡಿರುವ ಈ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣಪ್ರೇಮಿ ಹಾಗೂ ದಾನಿ ಜಯಂತಿಲಾಲ ಕವಾಡ, ಗದಗದ ಶತಮಾನೋತ್ಸವ ಶಾಲೆಗಳು ನಗರದ ಹೆಮ್ಮೆ. ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಗಂಡು ಮಕ್ಕಳ ಶಾಲೆ ನಂ.1 ಹಾಗೂ ಶಾಲೆ ನಂ.11ರ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಕುಟುಂಬದ ವತಿಯಿಂದ ಸ್ಕೂಲ್ ಬ್ಯಾಗ್ ವಿತರಿಸಲಾಗಿದ್ದು, ಮಕ್ಕಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ, ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪೂರ, ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಹೇಮಾದೇವಿ ಕವಾಡ, ಪೃಥ್ವಿರಾಜ್ ಬಾಫಣಾ, ಬಾವೇಶ್, ಪ್ರಿಯಲ್ ಕವಾಡ, ಶೈಲೇಶ್ ಬಾಗಮಾರ, ಪರವೀನ್ ಸಂಕಲೇಚಾ, ಮೋಹಿತ್, ಅಕ್ಷತಾ ಕವಾಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಆರ್.ಬಿ. ಹೊಸಮನಿ, ಹೇಮಲತಾ ಆಸಂಗಿ, ಶಿಕ್ಷಕಿಯರಾದ ಪವಿತ್ರಾ ಹಿರೇಮಠ, ಸರ್ವಮಂಗಳಾ ಗುಜಮಾಗಡಿ ಹಾಗೂ ಶಾಲೆಯ ಪಾಲಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮೂರು ಶಾಲೆಗಳ ವತಿಯಿಂದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯೋಪಾಧ್ಯಾಯಿನಿ ವಿಜಯಾ ಜಕರಡ್ಡಿ ಸ್ವಾಗತಿಸಿದರು. ಕಾವ್ಯಾ ದಂಡಿನ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಸುನಂದಾ ಕುಂಟೋಜಿ ವಂದಿಸಿದರು.
“ಶಿಕ್ಷಣಕ್ಕೆ ನೀಡುವ ದಾನವೇ ಶ್ರೇಷ್ಠ ದಾನ. ಸರ್ಕಾರಿ ಶಾಲೆಗಳ ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎಂಬ ಉದ್ದೇಶದಿಂದ ಈ ನೆರವು ನೀಡಿದ್ದೇವೆ.”
— ಜಯಂತಿಲಾಲ ಕವಾಡ, ದಾನಿ



