ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಹೆಮ್ಮೆಯ ಆಧ್ಯಾತ್ಮಿಕ ಹಾಗೂ ಸಂಗೀತ ಪರಂಪರೆಯ ಪ್ರತೀಕವಾಗಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಆಡಳಿತಾತ್ಮಕ ಹಾಗೂ ಹಣಕಾಸು ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಆಶ್ರಮವನ್ನು ಸರ್ಕಾರದ ವಶಕ್ಕೆ ಪಡೆದು ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಹೋರಾಟಗಾರ ರಾಜು ಖಾನಪ್ಪನವರ ನೇತೃತ್ವದಲ್ಲಿ ಸೋಮವಾರ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ನಾಡಿನ ಹೆಮ್ಮೆಯ ಆಧ್ಯಾತ್ಮಿಕ ಹಾಗೂ ಸಂಗೀತ ಪರಂಪರೆಯ ಪ್ರತೀಕವಾಗಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಆಡಳಿತಾತ್ಮಕ ಹಾಗೂ ಹಣಕಾಸು ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಆಶ್ರಮವನ್ನು ಸರ್ಕಾರದ ವಶಕ್ಕೆ ಪಡೆದು ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಹೋರಾಟಗಾರ ರಾಜು ಖಾನಪ್ಪನವರ ನೇತೃತ್ವದಲ್ಲಿ ಸೋಮವಾರ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರಾಜು ಖಾನಪ್ಪನವರ, ಲಿಂ. ಪಂಚಾಕ್ಷರ ಗವಾಯಿಗಳು ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳು ಕಟ್ಟಿ ಬೆಳೆಸಿದ ವೀರೇಶ್ವರ ಪುಣ್ಯಾಶ್ರಮವು ಸಾವಿರಾರು ಅಂಧ ಹಾಗೂ ಅನಾಥ ಮಕ್ಕಳಿಗೆ ಶಿಕ್ಷಣ, ಸಂಗೀತ ಮತ್ತು ಆಶ್ರಯ ನೀಡುವ ಮೂಲಕ ಅಪಾರ ಸೇವೆ ಸಲ್ಲಿಸಿದೆ. ಇಂತಹ ಪವಿತ್ರ ಸಂಸ್ಥೆಯಲ್ಲಿ ನಡೆಯುತ್ತಿರುವುದಾಗಿ ಹೇಳಲಾಗುತ್ತಿರುವ ಬೆಳವಣಿಗೆಗಳು ಭಕ್ತರಲ್ಲಿ ಆತಂಕ ಮೂಡಿಸಿವೆ ಎಂದು ಹೇಳಿದರು.
ಆಶ್ರಮಕ್ಕೆ ನಾಡಿನ ಮೂಲೆಮೂಲೆಗಳಿಂದ ಭಕ್ತರು ಹಣ, ದವಸ-ಧಾನ್ಯ ಹಾಗೂ ಇತರೆ ದೇಣಿಗೆಗಳನ್ನು ನೀಡುತ್ತಿದ್ದಾರೆ. ಆದರೆ ಈ ಸಂಪನ್ಮೂಲಗಳ ಬಳಕೆ ಕುರಿತು ಪಾರದರ್ಶಕತೆ ಇರಬೇಕೆಂಬುದು ಭಕ್ತರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಆಶ್ರಮದ ಆಡಳಿತ, ಹಣಕಾಸು ವ್ಯವಹಾರಗಳು ಹಾಗೂ ಆಸ್ತಿ ನಿರ್ವಹಣೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಆಶ್ರಮಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಕುರಿತು ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಥದ ಗಾಲಿಗಳ ಮೇಲೆ ದೇಣಿಗೆದಾರರ ಹೆಸರನ್ನು ಕೆತ್ತಿಸಿರುವ ವಿಚಾರವೂ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಅದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಆಶ್ರಮದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಸರ್ಕಾರ ತಕ್ಷಣ ಆಡಳಿತಾಧಿಕಾರಿಯನ್ನು ನೇಮಿಸಿ, ಆಶ್ರಮದ ಮೂಲ ಉದ್ದೇಶಗಳಾದ ಶಿಕ್ಷಣ, ಸಂಗೀತ ಸೇವೆ ಹಾಗೂ ಅನ್ನದಾಸೋಹಕ್ಕೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ವಿಷಯವನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹೇಶ ರೋಖಡೆ, ಅರುಣ್ ಬಾವಿ, ಶಿವಯೋಗಿ ಹಿರೇಮಠ, ಮಹಾಬಲೇಶ್ವರ ಶೆಟ್ಟರ್, ಪಿ.ಎಸ್. ಕಾಳೆ, ಸತೀಶ್ ಕುಂಬಾರ, ಅಶೋಕ್ ಬಜಂತ್ರಿ, ವೆಂಕಟೇಶ್ ದೊಡ್ಡಮನಿ, ಕುಮಾರ್ ನಡಗೇರಿ, ಕುಮಾರ ಮಿಟ್ಟಿಮಠ, ಈರಪ್ಪ ಹೆಬಸೂರು, ಈರಣ್ಣ ಪೂಜಾರ, ಭರತ ಲದ್ದಿ, ಸಿದ್ದಪ್ಪ ಯಳವತ್ತಿ, ಪ್ರವೀಣ್ ಕರಬಷ್ಟಿ, ಬಸನಗೌಡ ಪೊಲೀಸ್ ಪಾಟೀಲ್, ಹುಲುಗಪ್ಪ ವಾಲ್ಮೀಕಿ, ಸದಾನಂದ್ ಸಿಂಗ್ ಗುರ್ಲಸೂರ್, ಈರಣ್ಣ ಗಾಣಿಗೇರ, ದತ್ತು ವಿಠ್ಠಲಕರ, ಸಂಜು ಚಟ್ಟಿ, ವಿಶಾಲ್ ಗೋಕಾವಿ ಹಾಗೂ ವಿಶ್ವನಾಥ್ ಸಿರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ವೀರೇಶ್ವರ ಪುಣ್ಯಾಶ್ರಮದ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಹೋರಾಟ ಆಶ್ರಮದ ವಿರುದ್ಧವಲ್ಲ, ಆಶ್ರಮದಲ್ಲಿ ನಡೆಯುತ್ತಿರುವುದಾಗಿ ಆರೋಪಿಸಲಾಗುತ್ತಿರುವ ಅಧಿಕಾರ ದುರ್ಬಳಕೆ ಹಾಗೂ ಅನಧಿಕೃತ ಹಸ್ತಕ್ಷೇಪದ ವಿರುದ್ಧವಾಗಿದೆ.”
– ರಾಜು ಖಾನಪ್ಪನವರ, ಹಿಂದೂ ಸಂಘಟನೆಗಳ ಹೋರಾಟಗಾರ
“ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದಿರುವ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಯಬೇಕು. ಆಶ್ರಮದಲ್ಲಿ ಉಂಟಾಗಿರುವ ಗೊಂದಲವನ್ನು ಹಿರಿಯ ಯತಿಗಳು ಮಧ್ಯಪ್ರವೇಶಿಸಿ ಶಾಂತಿಯುತವಾಗಿ ಬಗೆಹರಿಸಬೇಕು.”
– ಮಗಚ ಡಾ. ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಕದಾಂಪೂರ



