ವಿಜಯಸಾಕ್ಷಿ ಸುದ್ದಿ, ಗದಗ: ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಪೋಲಿಯೋ ಲಸಿಕಾ ಅಭಿಯಾನಕ್ಕೆ ಗದಗ ಭಾವಸಾರ ವ್ಹಿಜನ್ ಇಂಡಿಯಾ ಸಂಘಟನೆ ಸಹಕಾರ ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯಿತು.
ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಪೋಲಿಯೋ ಲಸಿಕಾ ಅಭಿಯಾನಕ್ಕೆ ಗದಗ ಭಾವಸಾರ ವ್ಹಿಜನ್ ಇಂಡಿಯಾ ಸಂಘಟನೆ ಸಹಕಾರ ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯಿತು.
ಗದಗ 1ನೇ ವೃತ್ತದ 213ನೇ ಅಂಗನವಾಡಿ ಕೇಂದ್ರದ 13ನೇ ಬೂತ್ ವತಿಯಿಂದ ನಗರದ ಡಾ. ಹುಯಿಲಗೋಳ ಸಿಟಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಡಾ. ಸಂತೋಷ ಹುಯಿಲಗೋಳ ಹಾಗೂ ಶ್ರೀಮತಿ ರೂಪಾ ಹುಯಿಲಗೋಳ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಾ. ಸಂತೋಷ ಹುಯಿಲಗೋಳ, ಪೋಲಿಯೋ ರೋಗವು ಮಕ್ಕಳನ್ನು ಶಾಶ್ವತ ಅಂಗವೈಕಲ್ಯಕ್ಕೆ ತಳ್ಳುವ ಅಪಾಯಕಾರಿ ಕಾಯಿಲೆಯಾಗಿದ್ದು, ಲಸಿಕೆಯಿಂದ ಮಾತ್ರ ಅದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ. ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಪ್ರತಿಯೊಬ್ಬ ಪೋಷಕರು ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಗದಗ ಭಾವಸಾರ ವ್ಹಿಜನ್ ಇಂಡಿಯಾ ಅಧ್ಯಕ್ಷ ಶ್ರೀಪಾದ ವೈಕುಂಠೆ ಮಾತನಾಡಿ, ಸಂಘಟನೆಯು ಆರಂಭದಿಂದಲೂ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತ ಬಂದಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಪೋಲಿಯೋ ಲಸಿಕಾ ಅಭಿಯಾನಕ್ಕೂ ಸಂಪೂರ್ಣ ಸಹಕಾರ ನೀಡಲಾಗಿದ್ದು, ಸರ್ಕಾರದ ಆರೋಗ್ಯ ಕಾರ್ಯಕ್ರಮಗಳು ಯಶಸ್ವಿಯಾಗಲು ಸ್ವಯಂಸೇವಾ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯದರ್ಶಿ ಸುಧಾ ವೈಕುಂಠೆ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಮರಿಯಮ್ಮ ಕಡೂರ, ಪವನಕುಮಾರ, ವೀರಣ್ಣ ಬೆಳಮಕರ, ರಾಜೇಂದ್ರ ತ್ರಿಮಲ್ಲೆ, ರಾಜೇಶ್ವರಿ ಸಣ್ಣಕ್ಕಿ, ವಿಜಯಾ ನವಲೆ, ಮಂಜುಳಾ ಜಾಧವ, ಡಾ. ದತ್ತಾತ್ರೇಯ ವೈಕುಂಠೆ, ಲಕ್ಷ್ಮೀ ಬೆಳಮಕರ, ಕಾವ್ಯಾ ದೊಡ್ಡಮನಿ, ರಾಘವೇಂದ್ರ ನವಲೆ, ಮಲ್ಲಮ್ಮ ಪಲ್ಲೇದ ಹಾಗೂ ಮಮತಾಜ್ ಧಾರವಾಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
170 ಮಕ್ಕಳಿಗೆ ಲಸಿಕೆ
ನಗರದ ವೀರರಾಣಿ ಕಿತ್ತೂರ ಚೆನ್ನಮ್ಮ ಸರ್ಕಲ್ ಹಾಗೂ ಹುಯಿಲಗೋಳ ಆಸ್ಪತ್ರೆ ಸುತ್ತಮುತ್ತಲಿನ ಹಿಂದುಳಿದ ಪ್ರದೇಶಗಳ ಐದು ವರ್ಷದೊಳಗಿನ ಸುಮಾರು 170 ಮಕ್ಕಳಿಗೆ ಭಾನುವಾರ ಸಂಜೆಯವರೆಗೆ ಪೋಲಿಯೋ ಲಸಿಕೆ ನೀಡಲಾಯಿತು. ಆರೋಗ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರ ಸಹಕಾರದಿಂದ ಅಭಿಯಾನ ಯಶಸ್ವಿಯಾಗಿ ನಡೆಯಿತು.
“ಪೋಲಿಯೋವನ್ನು ತಡೆಗಟ್ಟಲು ಲಸಿಕೆಯೇ ಅತ್ಯಂತ ಪರಿಣಾಮಕಾರಿ ಅಸ್ತ್ರ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.”
ಡಾ. ಸಂತೋಷ ಹುಯಿಲಗೋಳ



