ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಅಂತೂರ–ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನಮಠದಲ್ಲಿ ರಾಚೋಟೀಶ್ವರ ಶಿವಾಚಾರ್ಯರ 60ನೇ ಮೌನಾನುಷ್ಠಾನ ಹಾಗೂ 16ನೇ ಶಿವಯೋಗ ಸಮಾಧಿಯ ಮುಕ್ತಾಯ ಮಹಾಮಂಗಳೋತ್ಸವ ಜುಲೈ 5ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಪ್ರವಚನಕಾರ ಮಡಿವಾಳಯ್ಯ ಶಾಸ್ತ್ರಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ, ನೀರು, ಗಾಳಿ ಹಾಗೂ ಬೆಳಕಿಲ್ಲದ ಸ್ಥಳದಲ್ಲಿ 33 ದಿನಗಳ ಕಾಲ ತಪಸ್ಸು ಆಚರಿಸಿರುವ ರಾಚೋಟೀಶ್ವರ ಶ್ರೀಗಳು ಜುಲೈ 5ರಂದು ಬೆಳಿಗ್ಗೆ 9.30ಕ್ಕೆ ಸಮಾಧಿ ಸ್ಥಳದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ಹೇಳಿದರು.
ಜೂನ್ 2ರಿಂದ ಆರಂಭಗೊಂಡಿರುವ ಭೀಮಕವಿ ವಿರಚಿತ ಬಸವೇಶ್ವರ ಪುರಾಣ ಪ್ರವಚನ ಜುಲೈ 4ರಂದು ಮಹಾಮಂಗಲದೊಂದಿಗೆ ಮುಕ್ತಾಯಗೊಳ್ಳಲಿದೆ. ಜುಲೈ 1ರಿಂದ 4ರವರೆಗೆ ವಿಶೇಷ ಪೂಜೆ, 775 ಶಿವಲಿಂಗಗಳ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಜುಲೈ 5ರಂದು ಬೂದೀಶ್ವರರ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ ಎಂದರು.
ಜುಲೈ 1ರಂದು ಷಟಸ್ಥಲ ಧ್ವಜಾರೋಹಣ ಹಾಗೂ 775 ಶಿವಲಿಂಗ ಪ್ರತಿಷ್ಠಾಪನೆ, ಜುಲೈ 2 ಮತ್ತು 3ರಂದು ಧರ್ಮಸಭೆಗಳು, ಜುಲೈ 4ರಂದು ಬಸವಪುರಾಣ ಮಹಾಮಂಗಲೋತ್ಸವ ನಡೆಯಲಿದೆ. ವಿವಿಧ ದಿನಗಳಲ್ಲಿ ದೇವರಹಿಪ್ಪರಗಿ ಜಡೇಮಠದ ಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮೀಜಿ, ಕೊಣ್ಣೂರ ಸಿದ್ಧಲಿಂಗ ಶಿವಾಚಾರ್ಯರು, ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಜುಲೈ 5ರಂದು ನಡೆಯುವ ಶಿವಯೋಗ ಸಮಾಧಿ ಮಹಾಮಂಗಳೋತ್ಸವ ಹಾಗೂ ಬೂದೀಶ್ವರರ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಂಡರಗಿ ಅನ್ನದಾನೇಶ್ವರ ಮಠದ ಜಗದ್ಗುರು ಡಾ. ನಾಡೋಜ ಅನ್ನದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ರಾಚೋಟೀಶ್ವರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ದೇವರಹಿಪ್ಪರಗಿ ಜಡೇಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಲೋಕಕಲ್ಯಾಣ, ಯೋಧರು ಹಾಗೂ ರೈತರ ಶ್ರೇಯೋಭಿವೃದ್ಧಿಗಾಗಿ ರಾಚೋಟೀಶ್ವರ ಶ್ರೀಗಳು ಶಿವಯೋಗ ಸಮಾಧಿ ಕೈಗೊಂಡಿದ್ದಾರೆ. ಮುಕ್ತಾಯ ಸಮಾರಂಭಕ್ಕೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಮಹಾಲಿಂಗಪುರದ ಗುರುಲಿಂಗ ದೇವರು ಮಾತನಾಡಿ, ಜುಲೈ 6ರಂದು ಬೆಳಿಗ್ಗೆ 5 ಗಂಟೆಗೆ “ದುಶ್ಚಟಗಳ ಭಿಕ್ಷೆ–ಸದ್ಗುಣಗಳ ದೀಕ್ಷೆ” ಎಂಬ ಸಂಕಲ್ಪದೊಂದಿಗೆ ಬೂದೀಶ್ವರ ಮಠದಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೆ ಧರ್ಮಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಕೆ. ಆಲೂರು, ಮಂಜುನಾಥ ಮಜ್ಜಿಗುಡ್ಡ, ಬೂದಪ್ಪ ಜಿಣಿಗಿ ಹಾಗೂ ಮಂಜುನಾಥ ಬಾವಿಕಟ್ಟಿ ಉಪಸ್ಥಿತರಿದ್ದರು.



