ಚಿಕ್ಕಮಗಳೂರು: ಶೃಂಗೇರಿ ತಾಲೂಕು ಕಚೇರಿ ಮುಂಭಾಗದ 2 ಕೋಟಿ ರೂ. ವೆಚ್ಚದ ತಡೆಗೋಡೆ ಮಳೆ ಆರಂಭವಾಗುತ್ತಿದ್ದಂತೆಯೇ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಗೋಡೆಯ ಕೆಳಭಾಗದಲ್ಲಿರುವ 4 ಮನೆಗಳು ಮತ್ತು 18ಕ್ಕೂ ಹೆಚ್ಚು ಅಂಗಡಿಗಳಿಗೆ ಜೀವಭೀತಿ ಎದುರಾಗಿದ್ದು, ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ಆರಂಭಿಸಿದೆ.
ಸುಮಾರು 50 ಅಡಿ ಎತ್ತರ, 120 ಅಡಿ ಅಗಲದ ತಡೆಗೋಡೆಯಲ್ಲಿ ಬಿರುಕು ಕ್ಷಣಕ್ಷಣಕ್ಕೂ ವಿಸ್ತರಿಸುತ್ತಿದೆ. ಗೋಡೆ ಕುಸಿದರೆ ಭದ್ರಾ ನದಿಯ ದಡದಲ್ಲಿರುವ ಕಟ್ಟಡಗಳು ಅಪಾಯಕ್ಕೆ ಸಿಲುಕಲಿದ್ದು, ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸಂಚಾರಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ.
2024ರ ಭೂಕುಸಿತದ ಬಳಿಕ ನಿರ್ಮಿಸಲಾದ ಈ ತಡೆಗೋಡೆ ಕೆಲವೇ ತಿಂಗಳಲ್ಲಿ ಬಿರುಕು ಬಿಟ್ಟಿರುವುದು ಕಳಪೆ ಕಾಮಗಾರಿ ಆರೋಪಕ್ಕೆ ಕಾರಣವಾಗಿದೆ. ಗೋಡೆಯೊಳಗೆ ಮಣ್ಣು ತುಂಬಿ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಸಚಿವ ಡಿ.ಎನ್. ಜೀವರಾಜ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಗುಣಮಟ್ಟ ಪ್ರಶ್ನಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇತ್ತ ತಾಲೂಕು ಆಡಳಿತ ಮನೆ ಹಾಗೂ ಅಂಗಡಿಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಿದ್ದು, ಕಾಳಜಿ ಕೇಂದ್ರ ತೆರೆಯಲು ಮುಂದಾಗಿದೆ. ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿ ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಅನುಪ್ ತಿಳಿಸಿದ್ದಾರೆ.



