ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಂದು ಕಡೆ ಮುಂಗಾರು ಮಳೆ ಕೈಕೊಟ್ಟು ಬೆಳೆ ಒಣಗುವ ಆತಂಕ, ಮತ್ತೊಂದೆಡೆ ಜಿಂಕೆಗಳ ಹಾವಳಿ, ಈಗ ಕುರಿಗಳ ಹಿಂಡಿನಿಂದಲೇ ಬೆಳೆ ಸಂಪೂರ್ಣ ನಾಶ. ಇಂತಹ ದುಸ್ಥಿತಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ರೈತನನ್ನು ಕಂಗಾಲಾಗಿಸಿದೆ.
ಗ್ರಾಮದ ರೈತ ಪ್ರಭುರಾಜ ರೇಣುಕಮಠ ಅವರು ಜಿಗಳೂರ ಗ್ರಾಮದ ಸರಹದ್ದಿನಲ್ಲಿರುವ ತಮ್ಮ ಒಂದು ಎಕರೆ ಜಮೀನಿನಲ್ಲಿ ಹೆಸರು ಬೆಳೆ ಬೆಳೆದಿದ್ದರು. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಕುರಿಗಳ ಹಿಂಡು ಹೊಲಕ್ಕೆ ನುಗ್ಗಿ ಇಡೀ ಬೆಳೆ ಮೇಯ್ದು ಹಾಕಿದ್ದು, ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಈ ವರ್ಷ ಮಳೆಯ ಕೊರತೆಯಿಂದಲೇ ರೈತರು ಸಂಕಷ್ಟದಲ್ಲಿದ್ದಾರೆ. ಸಾಲ-ಸೂಲ ಮಾಡಿ ಬಿತ್ತನೆ ನಡೆಸಿದ ಬೆಳೆಗಳು ಮಳೆ ಇಲ್ಲದೆ ಒಣಗುವ ಹಂತ ತಲುಪಿವೆ. ಇದರ ನಡುವೆ ಕುರಿಗಳಿಂದ ಬೆಳೆ ಹಾನಿಯಾಗಿರುವುದು ರೈತನ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಜಕ್ಕಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನುಗಳು ಗ್ರಾಮದಿಂದ 6ರಿಂದ 8 ಕಿಲೋಮೀಟರ್ ದೂರದಲ್ಲಿರುವುದರಿಂದ ಹೊರ ಜಿಲ್ಲೆಗಳಿಂದ ಬರುವ ಕುರಿಗಾಹಿಗಳು ಈ ಭಾಗದಲ್ಲಿ ಕುರಿ ಮೇಯಿಸುತ್ತಾರೆ. ಇದರಿಂದ ಕೃಷಿ ಜಮೀನುಗಳಿಗೆ ಆಗಾಗ ಹಾನಿಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಜಿಂಕೆಗಳ ಹಾವಳಿಯೂ ಹೆಚ್ಚಾಗಿದ್ದು, ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ತಿಳಿಸಿದ್ದಾರೆ.
ಕುರಿಗಾರರು ಬೆಳೆ ಇರುವ ಜಮೀನುಗಳಿಗೆ ಕುರಿಗಳನ್ನು ನುಗ್ಗಿಸದಂತೆ ಎಚ್ಚರಿಕೆ ವಹಿಸಬೇಕು. ರೈತರ ಶ್ರಮಕ್ಕೆ ಗೌರವ ನೀಡಿ ಜಾನುವಾರುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಬೆಳೆ ಹಾನಿಯಿಂದ ಉಂಟಾದ ನಷ್ಟಕ್ಕೆ ಸಂಬಂಧಿಸಿದ ಇಲಾಖೆ ಪರಿಹಾರ ಒದಗಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತ ಪ್ರಭುರಾಜ ರೇಣುಕಮಠ ಆಗ್ರಹಿಸಿದ್ದಾರೆ.
“ತಿಂಗಳುಗಟ್ಟಲೆ ಶ್ರಮಪಟ್ಟು ಬೆಳೆದ ಹೆಸರು ಬೆಳೆ ಕೆಲವೇ ನಿಮಿಷಗಳಲ್ಲಿ ಕುರಿಗಳು ಮೇಯ್ದು ಹಾಕಿವೆ. ಒಂದು ಕಡೆ ಮಳೆ ಇಲ್ಲ, ಮತ್ತೊಂದು ಕಡೆ ವನ್ಯಜೀವಿಗಳ ಹಾವಳಿ, ಈಗ ಕುರಿಗಳ ಕಾಟ. ರೈತ ಬದುಕುವುದಾದರೂ ಹೇಗೆ?”
– ಪ್ರಭುರಾಜ ರೇಣುಕಮಠ, ರೈತ



