ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಆಧುನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪರಿಚಯಿಸಿರುವ ನ್ಯಾನೋ ಯೂರಿಯಾ ಗೊಬ್ಬರದ ಸಮರ್ಪಕ ಬಳಕೆಯಿಂದ ರೈತರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಸೂರಣಗಿ ಗ್ರಾಮದ ವಿಎಸ್ಎಸ್ ಬ್ಯಾಂಕ್ ವತಿಯಿಂದ ರೈತ ಬಸವರಾಜ ಸಾಸಲವಾಡ ಅವರ ಜೋಳದ ಹೊಲದಲ್ಲಿ ಆಯೋಜಿಸಿದ್ದ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಹರಳು ರೂಪದ ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾವನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು, ಕಡಿಮೆ ಪ್ರಮಾಣದಲ್ಲಿಯೇ ಉತ್ತಮ ಫಲಿತಾಂಶ ನೀಡುವ ಸಾಮರ್ಥ್ಯ ಇದಕ್ಕಿದೆ. ಇದರಿಂದ ಗೊಬ್ಬರ ಬಳಕೆ ಕಡಿಮೆಯಾಗುವುದರ ಜೊತೆಗೆ ಸಾಗಣೆ ಮತ್ತು ಸಿಂಪರಣೆ ಸುಲಭವಾಗಲಿದೆ. ಡ್ರೋನ್ ತಂತ್ರಜ್ಞಾನದ ಬಳಕೆಯಿಂದ ಸಮಯ ಹಾಗೂ ಕಾರ್ಮಿಕ ವೆಚ್ಚವೂ ಗಣನೀಯವಾಗಿ ಉಳಿತಾಯವಾಗುತ್ತದೆ ಎಂದು ಹೇಳಿದರು.
ನ್ಯಾನೋ ಯೂರಿಯಾದ ಸರಿಯಾದ ಬಳಕೆ, ಸಿಂಪರಣೆಯ ಹಂತಗಳು ಹಾಗೂ ಅದರ ಪ್ರಯೋಜನಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ನಿರಂತರ ಜಾಗೃತಿ ಮೂಡಿಸಬೇಕು. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಕೃಷಿಯೂ ಹೆಚ್ಚು ಲಾಭದಾಯಕವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷೆ ಶಶಿಕಲಾ ಸಾಸಲವಾಡ, ನಿರ್ದೇಶಕರಾದ ಬಸವರಾಜ ಚಕ್ರಸಾಲಿ, ನಾಗರಾಜ ಹಾವಳಕೇರಿ, ವೀರೇಶ ಸಾಸಲವಾಡ, ಸಚಿನ್ ಮೇಲ್ಮುರಿ, ತುಕಾರಾಮ ಲಮಾಣಿ, ಬಸವರಾಜ ಕರಡಿಕೊಪ್ಪ, ಅರುಣ ಕಳ್ಳಿಹಾಳ, ಕುಮಾರ ಬೆಟಗೇರಿ, ಮಲ್ಲಿಕಾರ್ಜುನ ಶೀರನಹಳ್ಳಿ, ಫಕ್ಕೀರೇಶ ಕುರುಬರ, ಅಪ್ಪಣ್ಣ ಬಲಿಗಾರ, ಈರಣ್ಣ ಶೀರನಹಳ್ಳಿ ಸೇರಿದಂತೆ ಬ್ಯಾಂಕಿನ ಪದಾಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
“ಡ್ರೋನ್ ತಂತ್ರಜ್ಞಾನ ಮತ್ತು ನ್ಯಾನೋ ಯೂರಿಯಾ ಬಳಕೆಯಿಂದ ರೈತರ ವೆಚ್ಚ ಕಡಿಮೆಯಾಗಿ ಕೃಷಿ ಹೆಚ್ಚು ಲಾಭದಾಯಕವಾಗಲಿದೆ.”
— ಡಾ. ಚಂದ್ರು ಲಮಾಣಿ, ಶಾಸಕ



