ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಅಂತೂರು-ಬೆಂತೂರು ಗ್ರಾಮದಲ್ಲಿ ಲೋಕಕಲ್ಯಾಣಕ್ಕಾಗಿ 33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನ ನಡೆಸಿದ ಪೂಜ್ಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಆರೋಗ್ಯ ವಿಚಾರಿಸಿ ಭಕ್ತರು ಆಶೀರ್ವಾದ ಪಡೆದರು.
ಈ ವೇಳೆ ತಮ್ಮ ಆರೋಗ್ಯದ ಕುರಿತು ಭಕ್ತರಿಗೆ ಸಂದೇಶ ನೀಡಿದ ಶ್ರೀಗಳು, “ನನ್ನ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದ ಮತ್ತು ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ” ಎಂದು ತಿಳಿಸಿದರು.
ಇನ್ನೂ ಕೆಲವು ದಿನಗಳಲ್ಲಿ ಸಂಪೂರ್ಣ ಚೇತರಿಸಿಕೊಂಡು ಅಂತೂರು-ಬೆಂತೂರು ಮಠಕ್ಕೆ ಮರಳಿ ಭಕ್ತರ ದರ್ಶನಕ್ಕೆ ಲಭ್ಯವಾಗುತ್ತೇನೆ ಎಂದು ಶ್ರೀಗಳು ಭರವಸೆ ನೀಡಿದರು.
ಅಲ್ಲದೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಲೋಕಕಲ್ಯಾಣಕ್ಕಾಗಿ ಎಲ್ಲರೂ ಪ್ರಾರ್ಥನೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಗೌರವಾಧ್ಯಕ್ಷ ನಿಂಗನಗೌಡ ಎಸ್. ಮಾಲಿಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಾರುತಿ ಈಳಗೇರ, ಕರವೇ ಯುವ ಮುಖಂಡರಾದ ರಾಹುಲ್ ತೆರದಾಳ, ಹುಲಿಗೇಶ ಚೌಡಣ್ಣವರ, ಮಲ್ಲಿಕಾರ್ಜುನ ಈಳಗೇರ, ಶ್ರೀನಿವಾಸ ಶೇಖರ ಇಳಗೇರ ಸೇರಿದಂತೆ ಹಲವಾರು ಯುವ ಮುಖಂಡರು ಉಪಸ್ಥಿತರಿದ್ದರು.



