ಮುಂಬೈ: ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಬಲ ಭುಜಕ್ಕೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎರಡೂ ಭುಜಗಳಲ್ಲಿ ತೀವ್ರ ರೋಟೇಟರ್ ಕಫ್ ಗಾಯಗಳಿದ್ದರೂ, ಚೇತರಿಕೆ ಸುಲಭವಾಗುವ ಉದ್ದೇಶದಿಂದ ಮೊದಲ ಹಂತದಲ್ಲಿ ಬಲ ಭುಜಕ್ಕೆ ಮಾತ್ರ ಸುಮಾರು ಮೂರೂವರೆ ಗಂಟೆಗಳ ಸರ್ಜರಿ ನಡೆಸಲಾಗಿದೆ.
ಶಸ್ತ್ರಚಿಕಿತ್ಸೆಗೆ ಮುನ್ನ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಬಲ ಭುಜದಲ್ಲಿ ಮೊದಲೇ ಗೊತ್ತಿರದ ಅವಲ್ಶನ್ ಫ್ರಾಕ್ಚರ್ ಪತ್ತೆಯಾಗಿದ್ದು, ಇದರಿಂದ ಸರ್ಜರಿ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಆದಾಗ್ಯೂ ಚಿಕಿತ್ಸೆ ಯಶಸ್ವಿಯಾಗಿದ್ದು, ಪವನ್ ಕಲ್ಯಾಣ್ ವೈದ್ಯರ ನಿಗಾದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದರು. ಈ ಭೇಟಿಯ ಚಿತ್ರಗಳನ್ನು ಪತ್ನಿ ಅನ್ನಾ ಲೆಜ್ನೇವಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾವನಾತ್ಮಕ ಪೋಸ್ಟ್ನಲ್ಲಿ ಅನ್ನಾ, “ಪವನ್ ಕಲ್ಯಾಣ್ ತಮ್ಮ ನೋವನ್ನು ಎಂದಿಗೂ ಹೊರಹಾಕುವುದಿಲ್ಲ. ಜೀವನದ ಜವಾಬ್ದಾರಿಗಳೇ ಅವರಿಗೆ ಮೊದಲ ಆದ್ಯತೆ. ಈಗ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ. ಅವರು ಪ್ರತಿದಿನ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಜನಸೇನಾ ಪಕ್ಷದ ಪ್ರಕಾರ, ವೈದ್ಯರು ಮೊದಲೇ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದರೂ ಸಾರ್ವಜನಿಕ ಹಾಗೂ ಅಧಿಕೃತ ಕರ್ತವ್ಯಗಳ ಕಾರಣದಿಂದ ಅದನ್ನು ಮುಂದೂಡಲಾಗಿತ್ತು. ಈಗ ಬಲ ಭುಜದ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು, ಎಡ ಭುಜದ ಸರ್ಜರಿಯನ್ನು ಸುಮಾರು ಎರಡು ತಿಂಗಳ ಬಳಿಕ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ. ಕಳೆದ ವರ್ಷ ಇದೇ ಗಾಯದ ಬಗ್ಗೆ ಪ್ರತಿಕ್ರಿಯಿಸಿದ್ದ ಪವನ್ ಕಲ್ಯಾಣ್, “ಇದು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟ ಗಾಯ” ಎಂದು ಹಾಸ್ಯವಾಗಿ ಹೇಳಿದ್ದ ಮಾತು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.



