ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗಡಿಯಲ್ಲಿ ಹಗಲಿರುಳು ದೇಶವನ್ನು ಕಾಪಾಡುತ್ತಿರುವ ಸೈನಿಕರ ತ್ಯಾಗದಿಂದಲೇ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. 1999ರ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ನರೇಗಲ್ಲದ ನಿವೃತ್ತ ಸೈನಿಕರ ಸಂಘ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯ ಚಿಂತನೆ ಬೆಳೆಸುವ ಅಗತ್ಯವಿದೆ. ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಯಾರ ಆಹ್ವಾನಕ್ಕೂ ಕಾಯದೆ ಸ್ವಯಂಪ್ರೇರಿತವಾಗಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳ ಮೂಲಕ ನರೇಗಲ್ಲದ ನಿವೃತ್ತ ಸೈನಿಕರ ಸಂಘ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು.
ಮುತ್ತಣ್ಣ ಪಲ್ಲೇದ ಮಾತನಾಡಿ, ನಿವೃತ್ತ ಸೈನಿಕರು ತಮ್ಮ ಹೋರಾಟದ ಮನೋಭಾವನೆಯನ್ನು ಇಂದಿಗೂ ಉಳಿಸಿಕೊಂಡಿರುವುದು ಶ್ಲಾಘನೀಯ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರನ್ನು ಸದಾ ಸ್ಮರಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದರು.
ಡಾ. ಕೆ.ಬಿ. ಧನ್ನೂರ ಮಾತನಾಡಿ, ಸೈನಿಕರೇ ನಿಜವಾದ ದೇಶಭಕ್ತರು ಮತ್ತು ನಿಷ್ಕಾಮ ಕರ್ಮಯೋಗಿಗಳು. ಶಾಲೆ-ಕಾಲೇಜುಗಳಲ್ಲಿ ಎನ್ಸಿಸಿ ಕಡ್ಡಾಯಗೊಳಿಸಿದರೆ ಉತ್ತಮ ಸೈನಿಕರನ್ನು ರೂಪಿಸಲು ನೆರವಾಗಲಿದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸುವ ಕಾರ್ಯವನ್ನು ನಿವೃತ್ತ ಸೈನಿಕರ ಸಂಘ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಬಸವರಾಜ ವಂಕಲಕುಂಟಿ ಮಾತನಾಡಿ, ಭಾರತೀಯ ಯೋಧರು ಸಮರ್ಥ ಯುದ್ಧತಂತ್ರದಿಂದ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದರು. ದೇಶದೊಳಗಿನ ಹಿತಶತ್ರುಗಳ ವಿರುದ್ಧವೂ ಜಾಗೃತ ಮನೋಭಾವ ಅಗತ್ಯವಾಗಿದೆ. ಗಾಂಧಿ ಭವನವನ್ನು ಜೀರ್ಣೋದ್ಧಾರ ಮಾಡಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಶೋಕ ಬೇವಿನಕಟ್ಟಿ ಮಾತನಾಡಿ, ದೇಶಕ್ಕೆ ಸಂಕಷ್ಟ ಬಂದಾಗ ಸೂಕ್ತ ನಿರ್ಧಾರಗಳನ್ನು ಕೈಗೊಂಡು ದೇಶರಕ್ಷಣೆಗೆ ಮುಂದಾದ ನಾಯಕರನ್ನು ಸ್ಮರಿಸಬೇಕು. ನಿವೃತ್ತ ಸೈನಿಕರು ಇಂದಿಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಸುರೇಶ ಹಳ್ಳಿಕೇರಿ ಕಾರ್ಗಿಲ್ ಯುದ್ಧದ ಹಿನ್ನೆಲೆ ಮತ್ತು ಪರಿಣಾಮಗಳ ಕುರಿತು ವಿವರಿಸಿದರು.
ಶಿವಪುತ್ರಪ್ಪ ಸಂಗನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಶಾಂತಗೌಡ ಮತ್ತು ಕುಮಾರ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ದಾದಾಸಾಬ ನದಾಫ್ ನಿರೂಪಿಸಿದರು. ಮಲ್ಲನಗೌಡ ಮಲ್ಲನಗೌಡ್ರ ಸ್ವಾಗತಿಸಿದರು. ಪ್ರಭುದೇವ ಮುಕ್ಕಣ್ಣವರ ವಂದಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು ಭಾಗವಹಿಸಿ ಕಾರ್ಗಿಲ್ ವೀರಯೋಧರಿಗೆ ನಮನ ಸಲ್ಲಿಸಿದರು.
“ಗಡಿಯಲ್ಲಿ ನಿಂತು ದೇಶವನ್ನು ಕಾಯುವ ಸೈನಿಕರ ತ್ಯಾಗದಿಂದಲೇ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಕಾರ್ಗಿಲ್ ವೀರರ ತ್ಯಾಗವನ್ನು ಸದಾ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.”
– ಅರುಣ ಕುಲಕರ್ಣಿ, ನಿವೃತ್ತ ಮುಖ್ಯ ಶಿಕ್ಷಕ

