ವಿಜಯಸಾಕ್ಷಿ ಸುದ್ದಿ, ಗದಗ: ಶರಣರ ವಚನಗಳು ನಮ್ಮೊಳಗಿನ ಅವಗುಣಗಳನ್ನು ತೊಡೆದು ಜಾಗೃತ ಮನಸ್ಸಿನ ಬದುಕಿಗೆ ದಾರಿ ತೋರಿಸುತ್ತವೆ. ವಚನ ಸಾಹಿತ್ಯ, ಕಾಯಕ, ದಾಸೋಹ ಹಾಗೂ ಅನುಭಾವ ಮಂಟಪದಂತಹ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನೀಡಿದ ಶರಣ ಸಂಸ್ಕೃತಿಯೇ ಕನ್ನಡಿಗರ ಅಸ್ಮಿತೆಯಾಗಿದೆ ಎಂದು ಮಕ್ಕಳ ಸಾಹಿತಿ ಹಾಗೂ ರಂಗಕರ್ಮಿ ಡಾ. ನಿಂಗು ಸೊಲಗಿ ಹೇಳಿದರು.
ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಬೂದೀಶ್ವರ ಮಠದಲ್ಲಿ ಶನಿವಾರ ನಡೆದ 2ನೇ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರು, ಶರಣರ ‘ಇವ ನಮ್ಮವ’ ಎಂಬ ಸಮಾನತೆಯ ತತ್ವ, ಪಂಪ ಹಾಗೂ ಕನಕದಾಸರಂತಹ ಮಹಾಕವಿಗಳ ಸಂದೇಶ ಕನ್ನಡ ಸಾಹಿತ್ಯದುದ್ದಕ್ಕೂ ಸಾಮರಸ್ಯದ ಮೌಲ್ಯಗಳನ್ನು ಬಿತ್ತಿದೆ ಎಂದು ಹೇಳಿದರು.
ಮೇವುಂಡಿ ಮಲ್ಲಾರಿಯವರಂತಹ ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಮಾನವೀಯತೆಯ ಧ್ವನಿ ಎತ್ತಿದ್ದಾರೆ. ಮಕ್ಕಳಲ್ಲಿ ಇಂತಹ ಸಂವೇದನೆಗಳನ್ನು ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಡಿತ ಪರಂಪರೆ, ಜನಪದ ಪರಂಪರೆ ಹಾಗೂ ವಚನ-ದಾಸ ಪರಂಪರೆ ಎಂಬ ಮೂರು ಪ್ರಮುಖ ಧಾರೆಗಳಿವೆ. ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ವಚನ ಸಾಹಿತ್ಯ, ಕೃಷಿ ಸಂಸ್ಕೃತಿ ಹಾಗೂ ದಾಸೋಹ ತತ್ವಗಳನ್ನು ಅವರ ವಯೋಮಾನಕ್ಕೆ ತಕ್ಕಂತೆ ಕಥೆ, ನಾಟಕ ಹಾಗೂ ವಾಚಿಕೆಯ ಮೂಲಕ ಪರಿಚಯಿಸಬೇಕಿದೆ ಎಂದು ಹೇಳಿದರು.
ಇಂದಿನ ಪರೀಕ್ಷಾ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿರುವ ಸಹಜ ಕುತೂಹಲ ಮತ್ತು ಸೃಜನಶೀಲತೆಯನ್ನು ಕುಂಠಿತಗೊಳಿಸುತ್ತಿದೆ. ಮಕ್ಕಳು ಕೇವಲ ಅಂಕ ಗಳಿಸುವ ಯಂತ್ರಗಳಲ್ಲ; ಅವರಲ್ಲಿರುವ ಪ್ರತಿಭೆ ಮತ್ತು ಸಂವೇದನೆಗಳನ್ನು ಗುರುತಿಸಿ ಬೆಳೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪಬ್ಜಿ ಸೇರಿದಂತೆ ಹಿಂಸಾತ್ಮಕ ವಿಡಿಯೊ ಗೇಮ್ಗಳ ಬದಲಿಗೆ ಮಕ್ಕಳಿಗೆ ಜಾನಪದ ಆಟಗಳ ಪರಿಚಯ ಮಾಡಿಕೊಡಬೇಕು. ಇಂತಹ ಆಟಗಳು ಸಾಂಘಿಕ ಮನೋಭಾವ, ಪರಿಸರ ಪ್ರಜ್ಞೆ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಬೆಳೆಸುತ್ತವೆ ಎಂದು ಹೇಳಿದರು.
ಮಕ್ಕಳ ಸಾಹಿತ್ಯದಲ್ಲಿ ಹಳೆಯ ಮೌಲ್ಯಗಳ ಪುನರ್ಮೌಲ್ಯಮಾಪನ ಅಗತ್ಯವಾಗಿದೆ. “ಕಣ್ತೆರೆದು ನೋಡು, ಕಿವಿಗೊಟ್ಟು ಕೇಳು, ಬಾಯ್ತೆರೆದು ಹೇಳು” ಎಂಬ ಜಾಗೃತ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು. ಶಿಕ್ಷಣ ಕೇವಲ ಪರೀಕ್ಷೆಗೆ ಸೀಮಿತವಾಗದೆ, ಪೋಷಕರು, ಶಿಕ್ಷಕರು ಹಾಗೂ ಮಕ್ಕಳು ಸೃಜನಶೀಲ ಚಿಂತನೆಯತ್ತ ಸಾಗುವ ವಾತಾವರಣ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.
“ಮಕ್ಕಳು ಬರಿದಾದ ಬಿಳಿ ಹಾಳೆಯಲ್ಲ; ಅವರಲ್ಲಿರುವ ಸೃಜನಶೀಲತೆ, ಕುತೂಹಲ ಮತ್ತು ಸಂವೇದನೆಗಳನ್ನು ಬೆಳೆಸಿದಾಗ ಮಾತ್ರ ಸಮಾಜದ ಭವಿಷ್ಯ ಉಜ್ವಲವಾಗುತ್ತದೆ.”
– ಡಾ. ನಿಂಗು ಸೊಲಗಿ, ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ



