ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮನೆ-ಮನೆ ಭೇಟಿ ಕಾರ್ಯ ಸೋಮವಾರ ಮುಕ್ತಾಯಗೊಂಡಿದೆ.
ಜೂನ್ 30ರಿಂದ ಆರಂಭವಾಗಿದ್ದ ಈ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಕೋಟ್ಯಂತರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಅವುಗಳ ಡಿಜಿಟಲೀಕರಣ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ.
SIR ಪ್ರಕ್ರಿಯೆಯಡಿ ರಾಜ್ಯದಲ್ಲಿ ಒಟ್ಟು 5,54,32,314 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 4,46,00,369 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ವೇಳೆ ಒಟ್ಟು 1,08,31,945 ASDDO ಮತದಾರರು ಪತ್ತೆಯಾಗಿದ್ದಾರೆ.
ASDDO ಮತದಾರರು ಎಂದರೆ ಯಾರು?
ASDDO ಎಂದರೆ Absent, Shifted, Dead, Duplicate and Others ಎಂಬ ವರ್ಗಗಳನ್ನು ಒಳಗೊಂಡಿದೆ.
ಅಂದರೆ,
- ಗೈರುಹಾಜರಾಗಿರುವವರು
- ಶಾಶ್ವತವಾಗಿ ಸ್ಥಳಾಂತರಗೊಂಡವರು
- ಮೃತಪಟ್ಟವರು
- ನಕಲಿ ಅಥವಾ ಡುಪ್ಲಿಕೇಟ್ ಹೆಸರುಗಳು
- ಇತರೆ ಕಾರಣಗಳಿಂದ ಪರಿಶೀಲನೆ ಅಗತ್ಯವಿರುವ ಮತದಾರರು
ಈ ವರ್ಗಕ್ಕೆ ಸೇರುತ್ತಾರೆ.
7 ಲಕ್ಷಕ್ಕೂ ಹೆಚ್ಚು ಡುಪ್ಲಿಕೇಟ್ ಮತದಾರರು ಪತ್ತೆ!
SIR ಪ್ರಕ್ರಿಯೆಯಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 15,28,985 ಮತದಾರರು ನಾಪತ್ತೆಯಾಗಿರುವುದು ಪತ್ತೆಯಾಗಿದೆ. 65,61,607 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ.
ಇನ್ನು 16,38,839 ಮತದಾರರು ಮೃತಪಟ್ಟಿರುವುದು, 7,07,792 ಡುಪ್ಲಿಕೇಟ್ ಮತದಾರರು ಹಾಗೂ 3,94,722 ಇತರೆ ವರ್ಗದ ಮತದಾರರು ಪತ್ತೆಯಾಗಿದ್ದಾರೆ.
ಈ ಅಂಕಿ-ಅಂಶಗಳ ಆಧಾರದಲ್ಲಿ ಸುಮಾರು 1.08 ಕೋಟಿ ಮತದಾರರ ಹೆಸರುಗಳು ಮೊದಲ ಕರಡು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಇದು ಅಂತಿಮ ನಿರ್ಧಾರವಲ್ಲ. ಪರಿಶೀಲನೆ ಹಾಗೂ ಆಕ್ಷೇಪಣೆಗಳ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಯಾರ ಹೆಸರು ಪಟ್ಟಿಯಲ್ಲಿ ಉಳಿಯಲಿದೆ, ಯಾರ ಹೆಸರು ಕೈಬಿಡಲಾಗುತ್ತದೆ ಎಂಬುದು ಸ್ಪಷ್ಟವಾಗಲಿದೆ.
ಆಗಸ್ಟ್ 24ಕ್ಕೆ ಮೊದಲ ಕರಡು ಪಟ್ಟಿ:
SIR ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ.
ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸದಿದ್ದರೆ ಅಥವಾ ಮತದಾರರ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದರೆ, ಸಂಬಂಧಪಟ್ಟ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಸಬಹುದು:
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಮತದಾರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಅಗತ್ಯ ದಾಖಲೆಗಳನ್ನು ನೀಡಲು ಅವಕಾಶವಿದೆ.
ಈ ಅವಧಿಯಲ್ಲಿ ಸಲ್ಲಿಕೆಯಾಗುವ ಆಕ್ಷೇಪಣೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಪರಿಶೀಲನೆ, ಆಕ್ಷೇಪಣೆ ಹಾಗೂ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಹೀಗಾಗಿ ಆಗಸ್ಟ್ 24ರಂದು ಪ್ರಕಟವಾಗುವ ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದಿದ್ದರೆ ಮತದಾರರು ಆತಂಕಪಡುವ ಅಗತ್ಯವಿಲ್ಲ. ನಿಗದಿತ ಅವಧಿಯಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸಿ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು.
SIR ಪ್ರಕ್ರಿಯೆಯ ಪ್ರಮುಖ ಉದ್ದೇಶ ಮತದಾರರ ಪಟ್ಟಿಯನ್ನು ಪರಿಶುದ್ಧಗೊಳಿಸುವುದು ಹಾಗೂ ಅರ್ಹ ಮತದಾರರ ಹೆಸರುಗಳು ಮಾತ್ರ ಪಟ್ಟಿಯಲ್ಲಿ ಖಚಿತವಾಗುವಂತೆ ಮಾಡುವುದು. ನಾಪತ್ತೆ, ಸ್ಥಳಾಂತರ, ಮರಣ ಹಾಗೂ ಡುಪ್ಲಿಕೇಟ್ ಹೆಸರುಗಳಂತಹ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.



