ವಿಜಯಸಾಕ್ಷಿ ಸುದ್ದಿ, ಗದಗ: 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಗದಗ ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಯಾಮೆರಾದ ಪಿತಾಮಹ ಲೂಯಿಸ್ ಡಾಗ್ಯುರೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಕ್ಕಳಿಗೆ ಬೆಳಗಿನ ಉಪಹಾರ ವಿತರಿಸಲಾಯಿತು.
ಮಂಜು ಶಿಕ್ಷಣ ಸಂಸ್ಥೆಯ ಚೇರ್ಮನ್ ಶಂಕರ ಸಿಂಗ ರಜಪೂತ ಮಾತನಾಡಿ, ಛಾಯಾಗ್ರಾಹಕರ ಸಂಘದ ವತಿಯಿಂದ ವಿಶೇಷ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸಿರುವುದು ಸಂತಸದ ಸಂಗತಿ ಎಂದರು.
ಗದಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರವಾಡೆ ಮಾತನಾಡಿ, ಹುಟ್ಟುಹಬ್ಬ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಅನಗತ್ಯವಾಗಿ ಹಣ ಖರ್ಚು ಮಾಡುವ ಬದಲು ಇಂತಹ ಸಂಸ್ಥೆಗಳಿಗೆ ಭೇಟಿ ನೀಡಿ ವಿಶೇಷ ಮಕ್ಕಳಿಗೆ ಕೈಲಾದಷ್ಟು ನೆರವು ನೀಡಬೇಕು. ಉಪಹಾರ ಅಥವಾ ಊಟದ ವ್ಯವಸ್ಥೆ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸದಸ್ಯರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರವಾಡೆ ಅವರ ಪುತ್ರಿಯ ಹುಟ್ಟುಹಬ್ಬವನ್ನು ಸಹ ಮಕ್ಕಳೊಂದಿಗೆ ಆಚರಿಸಲಾಯಿತು. ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವೈಜನಾಥ ಕೌತಾಳ, ಗೌರವಾಧ್ಯಕ್ಷ ರಂಜಿತ್ ಬೇವಿನಕಟ್ಟಿ, ಕಾರ್ಯದರ್ಶಿ ಮಾದೇಗೌಡ ಸಂಕನಗೌಡ್ರು, ಕೆಪಿಎ ನಿರ್ದೇಶಕ ಮಂಜುನಾಥ ಲಕ್ಷಟ್ಟಿ ಹಾಗೂ ಸದಸ್ಯರಾದ ಸುರೇಶ್ ಮಿಸ್ಕಿನ್, ರಾಮು ಕಠಾರೆ, ರಾಜು ಬಾಕಳೆ, ಶಂಕರ್ ಬಾಕಳೆ, ಬಿಲಾಲ, ವೀರೇಶ್ ಗೌಡರ, ರವೀಂದ್ರ ಕೊಳ್ಳಿ, ಮಲ್ಲಿಕಾರ್ಜುನ ಬ್ಯಾಹಟ್ಟಿ, ದೀಪಕ್ ಬಾಕಳೆ, ನಾಗರಾಜ್ ಶಿದ್ಲಿಂಗ, ರವಿ ಬಳಿಗೇರ, ಬಾಬಣ್ಣ ಶಿದ್ಲಿಂಗ, ವಾದಿರಾಜ ಕುಲಕರ್ಣಿ, ಹನುಮಂತ, ಪ್ರಕಾಶ, ಚಿದಾನಂದ, ಮಂಜುನಾಥ ಮೆಹರವಾಡೆ, ತುಕಾರಾಂ ಪಾಂಡ್ರೆ, ಕೃಷ್ಣಾ ಪವಾರ ಹಾಗೂ ಶ್ರೀಧರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



