ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಅಂಚೆ ಕಚೇರಿಗಳಲ್ಲಿ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಏಕರೂಪದ ವ್ಯವಹಾರ ಸಮಯ ಜಾರಿಗೆ ತರಲಾಗಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯಿಂದ ಸಾರ್ವಜನಿಕರು ಬೆಳಗ್ಗೆ 9 ಗಂಟೆಯಿಂದಲೇ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ವಿವಿಧ ಅಂಚೆ ಹಾಗೂ ಹಣಕಾಸು ಸೇವೆಗಳನ್ನು ಪಡೆಯಬಹುದಾಗಿದೆ. ಉಳಿತಾಯ ಬ್ಯಾಂಕ್ (POSB) ವ್ಯವಹಾರಗಳು, ಸ್ಪೀಡ್ ಪೋಸ್ಟ್, ಪಾರ್ಸೆಲ್ ಸೇರಿದಂತೆ ವಿವಿಧ ಅಂಚೆ ಲೇಖನಗಳ ಬುಕ್ಕಿಂಗ್, ಇ-ಪಾವತಿ ಸೇವೆಗಳು, ಅಂಚೆ ಜೀವ ವಿಮೆ (PLI/RPLI) ಪ್ರೀಮಿಯಂ ಪಾವತಿ ಸೇರಿದಂತೆ ವಿವಿಧ ಸೇವೆಗಳು ನಿಗದಿತ ಸಮಯದಿಂದಲೇ ಲಭ್ಯವಾಗಲಿವೆ.
ಅಂಚೆ ಕಚೇರಿಗಳ ವ್ಯವಹಾರದ ಸಮಯವನ್ನು ಏಕರೂಪಗೊಳಿಸುವುದರಿಂದ ಸಾರ್ವಜನಿಕರು ತಮ್ಮ ಅಗತ್ಯದ ಅಂಚೆ ಸೇವೆಗಳನ್ನು ಸುಸಂಘಟಿತವಾಗಿ ಪಡೆದುಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ, ಅಂಚೆ ಸೇವೆಗಳ ಗುಣಮಟ್ಟ ಹಾಗೂ ದಕ್ಷತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ಅಂಚೆ ಇಲಾಖೆಯ ಗ್ರಾಹಕರು ಬೆಳಗ್ಗೆ 9 ಗಂಟೆಯಿಂದ ಲಭ್ಯವಾಗುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಮನವಿ ಮಾಡಿದ್ದಾರೆ.



