HomeSports Newsಕೊಹ್ಲಿ, ಧೋನಿ, ಬುಮ್ರಾ, ಕಪಿಲ್ ದೇವ್ʼರನ್ನು ಹಿಂದಿಕ್ಕಿದ ಸಚಿನ್: ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಆಯ್ಕೆ ಮಾಡಿದ...

ಕೊಹ್ಲಿ, ಧೋನಿ, ಬುಮ್ರಾ, ಕಪಿಲ್ ದೇವ್ʼರನ್ನು ಹಿಂದಿಕ್ಕಿದ ಸಚಿನ್: ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಆಯ್ಕೆ ಮಾಡಿದ ಅಶ್ವಿನ್

For Dai;y Updates Join Our whatsapp Group

ಚೆನ್ನೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂಬ ಪ್ರಶ್ನೆಗೆ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದೇ ಆದ ಉತ್ತರ ನೀಡಿದ್ದಾರೆ. ದಿಗ್ಗಜ ಆಟಗಾರರ ನಡುವೆ ನಡೆದ ಕುತೂಹಲಕಾರಿ ಹೋಲಿಕೆಯಲ್ಲಿ ಕೊನೆಗೂ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಆಯ್ಕೆ ಮಾಡಿದ್ದಾರೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ಟಾಕ್ ಶೋನಲ್ಲಿ ಮಾತನಾಡಿದ ಅಶ್ವಿನ್, ಭಾರತದ ಹಲವು ತಲೆಮಾರುಗಳ ಸ್ಟಾರ್ ಕ್ರಿಕೆಟಿಗರನ್ನು ಪರಸ್ಪರ ಹೋಲಿಕೆ ಮಾಡಿ ತಮ್ಮ ಆಯ್ಕೆಯನ್ನು ಅಂತಿಮಗೊಳಿಸಿದರು. ಈ ವೇಳೆ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ಸುನಿಲ್ ಗವಾಸ್ಕರ್, ಜಸ್ಪ್ರೀತ್ ಬುಮ್ರಾ, ವಿರೇಂದ್ರ ಸೆಹ್ವಾಗ್, ರವೀಂದ್ರ ಜಡೇಜಾ ಸೇರಿದಂತೆ ಹಲವು ದಿಗ್ಗಜರ ಹೆಸರುಗಳು ಚರ್ಚೆಗೆ ಬಂದವು.

ಕೊಹ್ಲಿ ವಿರುದ್ಧ ಬುಮ್ರಾ:

ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅಶ್ವಿನ್, ಕೊಹ್ಲಿ ಬದಲಿಗೆ ಬುಮ್ರಾ ಅವರನ್ನು ಆಯ್ಕೆ ಮಾಡಿದರು. ತಮ್ಮ ಆಯ್ಕೆಯ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅಶ್ವಿನ್, ತಾವೊಬ್ಬ ಬೌಲರ್ ಆಗಿರುವ ಕಾರಣ ಬುಮ್ರಾ ಅವರನ್ನು ಆಯ್ಕೆ ಮಾಡಿರಬಹುದು ಎಂದು ಹೇಳಿದರು.

ಧೋನಿಗೆ ಮಣೆ ಹಾಕಿದ ಅಶ್ವಿನ್:

ರವೀಂದ್ರ ಜಡೇಜಾ ಮತ್ತು ಮಾಜಿ ನಾಯಕ ಎಂ.ಎಸ್. ಧೋನಿ ನಡುವಿನ ಹೋಲಿಕೆಯಲ್ಲಿ ಅಶ್ವಿನ್, ಧೋನಿ ಅವರನ್ನು ಶ್ರೇಷ್ಠರೆಂದು ಆಯ್ಕೆ ಮಾಡಿದರು. ಆದರೆ ಧೋನಿ ಹಾಗೂ ವಿರೇಂದ್ರ ಸೆಹ್ವಾಗ್ ನಡುವೆ ಆಯ್ಕೆ ಮಾಡುವ ಸಂದರ್ಭ ಬಂದಾಗ ಅಚ್ಚರಿಯ ನಿರ್ಧಾರ ಕೈಗೊಂಡ ಅಶ್ವಿನ್, ಧೋನಿ ಬದಲಿಗೆ ಸೆಹ್ವಾಗ್ ಅವರನ್ನು ಆಯ್ಕೆ ಮಾಡಿದರು.

ಇದಕ್ಕೂ ಮುನ್ನ ಸುನಿಲ್ ಗವಾಸ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ನಡುವೆ ನಡೆದ ಹೋಲಿಕೆಯಲ್ಲೂ ಅಶ್ವಿನ್, ಗವಾಸ್ಕರ್ ಅವರನ್ನು ಬದಿಗಿಟ್ಟು ಸೆಹ್ವಾಗ್ ಅವರಿಗೆ ಮಣೆ ಹಾಕಿದ್ದರು.

ಗಂಗೂಲಿ ವಿರುದ್ಧ ಅಶ್ವಿನ್:

ಸೌರವ್ ಗಂಗೂಲಿ ಮತ್ತು ತಮ್ಮ ನಡುವಿನ ಹೋಲಿಕೆಯಲ್ಲಿ ಅಶ್ವಿನ್, ಯಾವುದೇ ಹಿಂಜರಿಕೆಯಿಲ್ಲದೆ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಆಯ್ಕೆ ಮಾಡಿದರು.

ಕೊನೆಗೂ ಸಚಿನ್‌ಗೆ ಅಗ್ರಸ್ಥಾನ:

ಅಂತಿಮ ನಾಲ್ವರ ಪಟ್ಟಿಯಿಂದ ಇಬ್ಬರನ್ನು ಆಯ್ಕೆ ಮಾಡುವ ಹಂತದಲ್ಲಿ ಅಶ್ವಿನ್, ವಿರೇಂದ್ರ ಸೆಹ್ವಾಗ್ ಅವರನ್ನು ಕೈಬಿಟ್ಟು ಸಚಿನ್ ತೆಂಡೂಲ್ಕರ್ ಅವರನ್ನು ಉಳಿಸಿಕೊಂಡರು. ಮತ್ತೊಂದೆಡೆ ಜಸ್ಪ್ರೀತ್ ಬುಮ್ರಾ ಬದಲಿಗೆ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರನ್ನು ಆಯ್ಕೆ ಮಾಡಿದರು.

ಕೊನೆಯ ಹಂತದಲ್ಲಿ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅಶ್ವಿನ್, ತಮ್ಮ ವೈಯಕ್ತಿಕ ಇಷ್ಟವನ್ನು ಪರಿಗಣಿಸಿ ಸಚಿನ್ ತೆಂಡೂಲ್ಕರ್ ಅವರನ್ನೇ ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಘೋಷಿಸಿದರು.

ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ದಾಖಲೆ, ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಹಾಗೂ ಹಲವು ತಲೆಮಾರುಗಳ ಅಭಿಮಾನಿಗಳ ಮೇಲೆ ಬೀರಿದ ಪ್ರಭಾವವನ್ನು ಪರಿಗಣಿಸಿದರೆ ಅಶ್ವಿನ್ ಅವರ ಆಯ್ಕೆ ವಿಶೇಷ ಗಮನ ಸೆಳೆದಿದೆ. ಇದೇ ವೇಳೆ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಎಬಿ ಡಿವಿಲಿಯರ್ಸ್ ಅವರು ಸಚಿನ್ ತೆಂಡೂಲ್ಕರ್‌ಗಿಂತ ವಿರಾಟ್ ಕೊಹ್ಲಿಯೇ ಶ್ರೇಷ್ಠ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಈ ವಿಚಾರ ಮತ್ತೊಮ್ಮೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img