ಸಂಸ್ಥೆಯನ್ನು ಆರ್ಥಿಕವಾಗಿ ಬಲಗೊಳಿಸಿ : ಡಿ.ಎಂ. ದೇವರಾಜ

0
ksrtc
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾಗದಂತೆ ಕಾರ್ಯ ನಿರ್ವಹಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಸಂಸ್ಥೆಯನ್ನು ಆರ್ಥಿಕವಾಗಿ ಬಲಗೊಳಿಸಬೇಕೆಂದು ವಾಕರಸಾ ಸಂಸ್ಥೆಯ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ. ದೇವರಾಜ ಹೇಳಿದರು.

Advertisement

ಅವರು ಗದುಗಿನ ಹೊಸ ಬಸ್ ನಿಲ್ದಾಣದಲ್ಲಿ ಸೇವಾನಿವೃತ್ತರಾದ ಸಹಾಯಕ ಸಂಚಾರ ನಿರೀಕ್ಷಕ ಎಂ.ಆಂಜನೇಯ, ಸಾರಿಗೆ ನಿಯಂತ್ರಕ ಕೆ.ಬಿ. ಗಡಾದ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಮೇಲೆ ಬಹಳಷ್ಟು ಜವಾಬ್ದಾರಿಗಳಿವೆ. ಸರಕಾರ ಇತ್ತೀಚೆಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿದ ಬಳಿಕ ಬಸ್‌ಗಳ ಓಡಾಟ ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವದು ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿಯ ಕರ್ತವ್ಯವಾಗಿದೆ ಎಂದರು.

ಆಂಜನೇಯ ಮತ್ತು ಗಡಾದ ಅವರು ಸಂಸ್ಥೆಯ ಘನತೆ, ಗೌರವ ಹೆಚ್ಚಿಸುವ ರೀತಿಯಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ಅವರ ನಿವೃತ್ತಿಯ ಬಳಿಕ ಹೊಸದಾಗಿ ಆ ಸ್ಥಾನಕ್ಕೆ ಬರುವವರೂ ಸಹ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಉತ್ತಮ ಸೇವೆ ನೀಡಲಿ ಎಂದರು.

ಕಾರ್ಮಿಕ ಮುಖಂಡ ಎಸ್.ಕೆ. ಅಯ್ಯನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಖಂಡರಾದ ಮೋಹನ ಆಲಮೇಲಕರ, ಪಿ.ಎಂ. ತೇರದಾಳ, ಎಚ್.ಸಿ. ಕೊಪ್ಪಳ, ಗೋಪಾಲರಾಯ, ಅದರಗುಂಚಿ ಸೇವಾ ನಿವೃತ್ತರ ಬಗ್ಗೆ ಮಾತನಾಡಿದರು. ವೇದಿಕೆಯ ಮೇಲೆ ಕಾರ್ಮಿಕರ ಮುಖಂಡರಾದ ಶಾಂತಣ್ಣ ಮುಳವಾಡ, ರಾಮೇನಹಳ್ಳಿ, ಲಕ್ಷ್ಮಣ ಡೊಂಗರಿ, ಕಪ್ಪತ್ತನವರ, ಶಶಿಧರ ಕೊಡಕೇರಿ ಉಪಸ್ಥಿತರಿದ್ದರು.

ಎಸ್.ಜಿ. ಹುಣಶೀಮರದ ಪ್ರಾರ್ಥಿಸಿ ನಿರೂಪಿಸಿದರು. ಸಾರಿಗೆ ನಿಯಂತ್ರಕ ವೆಂಕಟೇಶ ಜಾಧವ ವಂದಿಸಿದರು.


Spread the love

LEAVE A REPLY

Please enter your comment!
Please enter your name here