Home Blog

ಲಿಂಗೈಕ್ಯ ಗುರುಗಳ ಅಧ್ಯಯನಶೀಲತೆ ಅನನ್ಯ:ಡಾ.ಮಹಾಂತಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ : ಅನ್ನ, ಅಕ್ಷರ, ದಾಸೋಹಕ್ಕೆ ನಾಡಿನಲ್ಲಿ ಪ್ರಸಿದ್ಧವಾಗಿರುವ ತೋಂಟದಾರ್ಯ ಮಠವು ಸಮಾಜಕ್ಕೆ ಕೊಡುಗೆ ನೀಡಿ ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸಿ ಗೌರವಿಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ಜಡೆ ಸಂಸ್ಥಾನಮಠದ ಪೂಜ್ಯ ಡಾ. ಮಹಾಂತ ಮಹಾಸ್ವಾಮಿಗಳು ನುಡಿದರು.

ಅವರು ಬುಧವಾರ ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರಾ ಮಹೋತ್ಸವದ ಲಘುರಥೋತ್ಸವ ಕಾರ್ಯಕ್ರಮದಲ್ಲಿ ಗೌರವ ಸಂಮಾನ ಸ್ವೀಕರಿಸಿ ಮಾತನಾಡಿದರು.

ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನನಗೆ ಮಾರ್ಗದರ್ಶಕರಾಗಿದ್ದರು. ನಾನು ಪೀಠಾಧಿಕಾರ ವಹಿಸಿಕೊಂಡ ದಿನದಂದು ಜಡೆ ಸಂಸ್ಥಾನಮಠದ ಸಂಪೂರ್ಣ ಇತಿಹಾಸವುಳ್ಳ ಪುಸ್ತಕವೊಂದನ್ನು ನನಗೆ ನೀಡಿ ಅಧ್ಯಯನ ಮಾಡುವಂತೆ ತಿಳಿಸಿದ್ದರು. ಲಿಂಗೈಕ್ಯ ಗುರುಗಳ ಅಧ್ಯಯನಶೀಲತೆ ಹಾಗೂ ಸಾಮಾಜಿಕ ಕಾಳಜಿ ನಮಗೆಲ್ಲರಿಗೂ ಸದಾಕಾಲ ಪ್ರೇರಣೆಯಾಗಿರುತ್ತದೆ ಎಂದರು.

ದೆಹಲಿ ಜಾಟವಾ ಸಮುದಾಯದ ಶ್ರೀಮಠದ ಭಕ್ತರು ಹಾಗೂ ಕಾರ್ಪೋರೇಶನ್ ಅಧಿಕಾರಿಗಳಾದ ರವೀಂದ್ರ ಪ್ರಧಾನ್ ಮಾತನಾಡಿ, ಜಾಟವಾ ಜನಾಂಗ ಮತ್ತು ತೋಂಟದಾರ್ಯ ಮಠಕ್ಕೂ ಇರುವ ಬಾಂಧವ್ಯವವನ್ನು ನೆನೆದರು. ಬೆಳಗಾವಿಯ ಪ್ರೊ.ಶಾಲಿನಿ ದೊಡಮನಿ ರಚಿಸಿದ `ಕರ್ನಾಟಕದ ಗಾಂಧಿ’ ಹರ್ಡೇಕರ ಮಂಜಪ್ಪನವರು ಗ್ರಂಥದ ಹಿಂದಿ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಡಾ.ಪ್ರಭು ಮಹಾಸ್ವಾಮಿಗಳು ವಿರಕ್ತಮಠ ಸಂಡೂರ, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಕಲಬುರ್ಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯಸ್ವಾಮಿಗಳು, ರಟಕಲ್ ಹಿರೇಮಠದ ರೇವಣಸಿದ್ಧ ಶಿವಾಚಾರ್ಯಸ್ವಾಮಿಗಳು, ಡಾ.ಮಹಾಂತಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಡಾ.ಅಶೋಕ ಹುಗ್ಗಣ್ಣವರ ವಚನ ಸಂಗೀತ ನೀಡಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ.ಕೆ.ಎಚ್ ಬೇಲೂರ ಸ್ವಾಗತಿಸಿದರು. ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಮುಂತಾದವರಿದ್ದರು.

ಜಾತ್ರಾ ಸಮಿತಿ ಉಪಾಧ್ಯಕ್ಷ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿಗಳಾದ ಗವಿಸಿದ್ಧಪ್ಪ ಗಾಣಿಗೇರ, ಬರಕತ್ ಅಲಿ ಮುಲ್ಲಾ, ಚಂದ್ರಶೇಖರ ಇಟಗಿ, ಸಂಘಟನಾ ಕಾರ್ಯದರ್ಶಿ ತಿಮ್ಮರಡ್ಡಿ ಕೋನರಡ್ಡಿ, ಕೋಶಾಧ್ಯಕ್ಷ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷ ಅಜಯ ಮುನವಳ್ಳಿ, ಶ್ರೀಮಠದ ವ್ಯವಸ್ಥಾಪಕರಾದ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ಶೇಖಣ್ಣ ಕಳಸಾಪೂರ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

ಜಡೆ ಸಂಸ್ಥಾನಮಠದ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಮಹಾಸ್ವಾಮಿಗಳು ಮಾತನಾಡಿ, ಕರ್ನಾಟಕ ರಾಜ್ಯ ಇಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಉನ್ನತ ಮಟ್ಟಕ್ಕೆ ತಲುಪಿದ್ದರೆ ಅದರ ಹಿಂದೆ ಮಠ-ಮಾನ್ಯಗಳ ಕೊಡುಗೆ ಸಾಕಷ್ಟಿದ್ದು, ತೋಂಟದಾರ್ಯ ಮಠ ಈ ಸಾಲಿನಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತದೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಪಾರ ವಿದ್ವತ್ತುಳ್ಳ ಅಪರೂಪದ ಯತಿಗಳಾಗಿದ್ದು, ನನಗೆ ಹಾಗೂ ನಮ್ಮ ಹಿರಿಯ ಸ್ವಾಮಿಗಳಿಗೆ ಅವರ ಮಾರ್ಗದರ್ಶನ ಸದಾಕಾಲ ಇರಬೇಕು ಎಂದರು.

ಬಾಲೇಹೊಸೂರ ಮಠದ ಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವ ಏ.28 ಮತ್ತು 29 ರಂದು ಜರುಗಲಿದೆ.

ಏ.28ರ ಪ್ರಾತಃಕಾಲ ಶ್ರೀ ಗುರು ದಿಂಗಾಲೇಶ್ವರರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಷಟಸ್ಥಲ ದ್ವಜಾರೋಹಣ, ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಸಂಜೆ 5ಕ್ಕೆ ಮಹಾರಥೋತ್ಸವ ಜರುಗುವುದು.

ಏ.29ರ ಸಂಜೆ 5ಕ್ಕೆ ಕಡುಬಿನ ಕಾಳಗ ಜರುಗುವುದು. ಭಕ್ತರು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.

ಬಾಲೇಹೊಸೂರ ಮಠದ ಕಿರು ಪರಿಚಯ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೇಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಮಠವು 300 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿದೆ. ಈ ಮಠದ ಲಿಂ.ಶ್ರೀಗಳೆಲ್ಲರೂ ಸಮಾಜಮುಖಿ ಮತ್ತು ಧಾರ್ಮಿಕ ಕಾರ್ಯಕ್ಕಾಗಿ ಸಮರ್ಪಿಸಿಕೊಂಡವರಾಗಿದ್ದರು. ಕಳೆದ 3 ದಶಕಗಳ ಹಿಂದೆ ಶ್ರೀಮಠದ 6ನೇ ಪಟ್ಟಾಧ್ಯಕ್ಷರು, ಸದ್ಯ ಶಿರಹಟ್ಟಿ ಫಕೀರೇಶ್ವರಮಠದ ಉತ್ತರಾಧಿಕಾರಿಗಳಾದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ತಮ್ಮ ಪಾಂಡಿತ್ಯ, ಪ್ರವಚನದ ಪ್ರಖರತೆ ಮತ್ತು ಶ್ರೀಮಠದ ಅಭಿವೃದ್ಧಿಗಾಗಿ ಹಾಗೂ ಧರ್ಮ ಯುದ್ಧಕ್ಕಾಗಿ ಶ್ರಮಿಸುವ ಮೂಲಕ ಬಾಲೇಹೊಸೂರ ಮಠವನ್ನು ನಾಡಿನಾದ್ಯಂತ ಗುರುತಿಸುವ ಮಹೋನ್ನತ ಕಾರ್ಯ ಮಾಡಿದ್ದಾರೆ.

jatre

ಫಕೀರ ದಿಂಗಾಲೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ನಾಡಿನ ಜನ ಮಾನಸದಲ್ಲಿ ಮನೆ ಮಾಡಿದ್ದಾರೆ. `ಸದ್ಗುಣಗಳ ದೀಕ್ಷೆ-ದುಶ್ಚಟಗಳ ದೀಕ್ಷೆ ಕಾರ್ಯಕ್ರಮದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಕಾಳಜಿ ಅವರದ್ದಾಗಿದೆ. ಪರಿಸರ ಪ್ರೇಮಿಗಳಾದ ಶ್ರೀಗಳು, ಮಠದ ಕಾರ್ಯಕ್ರಮದಲ್ಲಿ 5001 ಮಾತೆಯರಿಗೆ 1 ತೆಂಗು, 1 ಮಾವಿನ ಸಸಿಗಳನ್ನು ಉಡಿ ತುಂಬಿ ವನಸಿರಿ ಬೆಳೆಸುವಂತೆ ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದು ಅವರ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ. ಕೆರೆಗೆ ನದಿ ನೀರು ಹರಿಸಲು ಹೋರಾಟ, ಕೆರೆ ಹೂಳೆತ್ತುವ ಕಾರ್ಯ ಮಾಡಿದ್ದಾರೆ. ಸದಾ ಓದುವ ಹಂಬಲ ಹೊಂದಿರುವ ಇವರು ತಮ್ಮದೇ ಆದ ಗ್ರಂಥಾಲಯ ಹೊಂದಿದ್ದು, ಅಲ್ಲಿ ಅತ್ಯಂತ ಶ್ರೇಷ್ಠವಾದ ಸಾವಿರಾರು ಗ್ರಂಥಗಳಿವೆ. ಇದೀಗ ಕಳೆದ ಒಂದು ವರ್ಷದಿಂದ ಶಿರಹಟ್ಟಿ ಸಂಸ್ಥಾನದ ಮಠದ ಉತ್ತರಾಧಿಕಾರಿಗಳಾಗಿ ಧರ್ಮ ಜನಜಾಗೃತಿ, ಶಿಕ್ಷಣ ಸೇವೆ, ಸಾಮಾಜಿಕ ಬದಲಾವಣೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡಿರುವ ಫಕೀರ ದಿಂಗಾಲೇಶ್ವರ ಶ್ರೀಗಳು ಈ ನೆಲದ ನಾಡಿನ ಭಕ್ತರ ಮನೆ ಮಾತಾಗಿದ್ದಾರೆ.

ಗ್ರಾಮೀಣ ಭಾಗದ ಶ್ರೀಮಠಕ್ಕೆ ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಅಮೃತ ಶಿಲೆಯ ಭವ್ಯ ಮಠ, ದಾಸೋಹ ಭವನ, ಯಾತ್ರಿ ನಿವಾಸ, ಶಾಲೆ, ಗೋಶಾಲೆ, ಸಮುದಾಯ ಭವನ, ಸುಂದರ ಸಮೃದ್ಧ ತೋಟ ನಿರ್ಮಿಸಿ ಸಮಾಜಕ್ಕೆ ಸಮರ್ಪಿಸಿದ್ದಾರೆ. `ಮಠ ಕಟ್ಟುವುದು ಭಕ್ತರ ಕೆಲಸ, ಸಮಾಜ ಕಟ್ಟುವುದು, ಧರ್ಮ ಕಾಪಾಡುವುದು ಸ್ವಾಮಿಗಳ ಕೆಲಸ’ ಎಂದು ಹೇಳುವ ಶ್ರೀಗಳು ಭಕ್ತರು ನೀಡುವ ಕಾಣಿಕೆ ಸತ್ಕಾರ್ಯಕ್ಕೆ ಸಲ್ಲಬೇಕೆಂಬ ಉದ್ದೇಶ ಸಾಕಾರಗೊಳಿಸಿದ್ದಾರೆ. ಶ್ರೀಮಠವಿಂದು ನಾಡಿನೆಲ್ಲೆಡೆ ಹೆಸರಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆ ಜಾರಿ

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಲಿರುವ ದ್ವೀತಿಯ ಪಿಯುಸಿ ಪರೀಕ್ಷೆ-2 ಪರೀಕ್ಷೆಗಳನ್ನು ಏಪ್ರಿಲ್ 29ರಿಂದ ಮೇ 16ರವರೆಗೆ ಬೆಳಿಗ್ಗೆ 10.15 ಗಂಟೆಯಿಂದ ಸಂಜೆ 5.30ರವರೆಗೆ ನಡೆಸಲಿದೆ.

ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 29ರಿಂದ ಮೇ 16ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಐದು, ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಬುಕ್ ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಬಂದ್ ಮಾಡಲು ಆದೇಶಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನ್ನು ತರುವುದನ್ನು ನಿಷೇಧಿಸಲಾಗಿದೆ.

ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರ ಹೋಗುವ ಸಮಯದಲ್ಲಿ ಮಾತ್ರ ಚಿತ್ರೀಕರಿಸಲು ಮಾಧ್ಯಮದವರಿಗೆ ಅವಕಾಶವಿದ್ದು, ಪರೀಕ್ಷಾ ಗೌಪ್ಯತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ವೈಶಾಲಿ ಎಂ.ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ವಿವರ

ನಗರದ ಜ.ತೊಂಟದಾರ್ಯ ಪದವಿಪೂರ್ವ ಕಾಲೇಜು, ಹೆಚ್‌ಸಿಇಎಸ್ ಪದವಿಪೂರ್ವ ಕಾಲೇಜು, ಶಿರಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜು, ನರಗುಂದದ ಸರ್ಕಾರಿ ಪದವಿಪೂರ್ವ ಕಾಲೇಜು, ಮುಂಡರಗಿಯ ಜೆ.ಎ. ಪದವಿಪೂರ್ವ ಕಾಲೇಜು, ರೋಣದ ವೀರರಾಣಿ ಚನ್ನಮ್ಮ ಪದವಿಪೂರ್ವ ಕಾಲೇಜು, ಲಕ್ಷ್ಮೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜು, ಗಜೇಂದ್ರಗಡ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.

ಮೋದಿಗೆ ಕರ್ನಾಟಕದ ಜನರ ಮತ ಕೇಳುವ ನೈತಿಕತೆ ಇಲ್ಲ

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ 223 ತಾಲೂಕುಗಳು ಬರದಿಂದ ತತ್ತರಿಸಿವೆ. ಬರ ಪರಿಹಾರ ಕೊಡುವಂತೆ 2023ರ ಸಪ್ಟೆಂಬರ್‌ನಲ್ಲಿ ಸರಕಾರ ಮನವಿ ಮಾಡಿತ್ತು. ಅಕ್ಟೋಬರ್ 4ರಿಂದ 9ರವರೆಗೆ ಕೇಂದ್ರ ತಂಡ ಅಧ್ಯಯನ ನಡೆಸಿ, ವರದಿ ನೀಡಿದರೂ ಪ್ರಧಾನಿ ಮೋದಿ ಪರಿಹಾರ ಕೊಡಲಿಲ್ಲ. ಅಷ್ಟೇ ಅಲ್ಲದೆ, ೨೦೧೯ರಲ್ಲಿ ಭೀಕರ ಪ್ರವಾಹ ಬಂದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ ಆಗಲೂ ಕರ್ನಾಟಕದ ಮುಖ ನೋಡದ ಪ್ರಧಾನಿ ಮೋದಿ ಈಗ ಚುನಾವಣೆ ಪ್ರಚಾರಕ್ಕೆ ಪದೇ ಪದೇ ಕರ್ನಾಟಕ್ಕೆ ಬರುತ್ತಿದ್ದಾರೆ. ಅವರಿಗೆ ಕರ್ನಾಟಕದ ಜನರ ಮತ ಕೇಳುವ ನೈತಿಕತೆ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಜಿಲ್ಲೆಯ ಗಜೇಂದ್ರಗಡದ ಎಪಿಎಂಸಿ ಮೈದಾನದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರ ಪರಿಹಾರ ಕೋರಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗದಿದ್ದಲ್ಲಿ ಕೇಂದ್ರ ಸರಕಾರ ಕರ್ನಾಟಕದತ್ತ ತಿರುಗಿಯೂ ನೋಡುತ್ತಿರಲಿಲ್ಲ ಎಂದು ಹೇಳಿದರು.

ಸುಪ್ರಿಂಕೋರ್ಟ್ ಮೊರೆ ಹೋಗಿದ್ದರಿಂದಲೇ ಇವತ್ತು ಕೇಂದ್ರದಿಂದ ಬರ ಪರಿಹಾರ ಲಭ್ಯವಾಗುವ ಭರವಸೆ ಮೂಡಿದೆ. ಕೇಂದ್ರ ಸರಕಾರದ ಪರ ವಕೀಲರು ಕೇಳಿದ್ದ ಕಾಲಾವಕಾಶ ಮುಗಿಯುತ್ತಾ ಬಂದಿದ್ದು, ಅನುದಾನ ಬರುವ ನಿರೀಕ್ಷೆಯಿದೆ. ಆದರೆ ಈವರೆಗೂ ಹಣ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬರ ಪರಿಹಾರ ಮತ್ತು ಕೇಂದ್ರ ಸರಕಾರದ ಮಲತಾಯಿ ಧೋರಣೆ ವಿರುದ್ಧ ಕರ್ನಾಟಕದ 25 ಜನ ಬಿಜೆಪಿ ಸಂಸದರಿದ್ದರೂ ಸಂಸತ್‌ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತಾಡಲಿಲ್ಲ. ಕರ್ನಾಟಕವನ್ನು ಕಡೆಗಣಿಸಿದ ಬಿಜೆಪಿ ಮತ ಹಾಕಬೇಡಿ ಎಂದು ಸಿದ್ದರಾಮಯ್ಯ ವಿನಂತಿಸಿದರು.

ಮಹದಾಯಿ ಯೋಜನೆ ಜಾರಿಗಾಗಿ ರಕ್ತದಲ್ಲಿ ಪತ್ರ ಬರೆದ ಬಸವರಾಜ ಬೊಮ್ಮಾಯಿ, ಎರಡೂವರೆ ವರ್ಷ ಅಧಿಕಾರದಲ್ಲಿದ್ದರೂ ಮಹದಾಯಿ ಯೋಜನೆಯನ್ನು ಜಾರಿ ಮಾಡಲಿಲ್ಲ. ಸದ್ಯ ಕೇಂದ್ರ ಸರಕಾರ ಪರಿಸರ ಇಲಾಖೆ ಸದರಿ ಯೋಜನೆ ಜಾರಿಗೆ ತಡೆ ನೀಡಿದೆ. ರಾಜ್ಯ ಬಿಜೆಪಿ ನಾಯಕರು ಮತ್ತು ಕೇಂದ್ರದ ಬಿಜೆಪಿ ಸರಕಾರ ಪರಿಸರ ನಿರಪೇಕ್ಷಣಾ ದೊರಕಿಸಿಕೊಟ್ಟರೆ ನಾಳೆಯೇ ಕೆಲಸ ಆರಂಭಿಸಲಾಗುವುದು. ಅದಕ್ಕಾಗಿ ಈಗಾಗಲೇ ಟೆಂಡರ್ ಸಹ ಕರೆದಿದ್ದೇವೆ ಎಂದರು.

program

ಕಾಂಗ್ರೆಸ್ ಜಿಲ್ಲಾಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಹಾವೇರಿ-ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಆರ್.ಎಸ್. ಪಾಟೀಲ, ಶಾಸಕರಾದ ಶ್ರೀನಿವಾಸ ಮಾನೆ, ಆರ್. ಶಂಕರ್, ಯು.ಬಿ. ಬಣಕಾರ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

ನರೇಂದ್ರ ಮೋದಿ ಕಳೆದ 10 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಆದರೂ ಈವರೆಗೆ ಜನಸಾಮಾನ್ಯರ ಖಾತೆಗೆ 15 ಲಕ್ಷ ರೂಪಾಯಿ ಹಾಕಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಈಡೇರಿಸಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಿದರು, ಆದರೆ ರೈತರ ಖರ್ಚು ದುಪ್ಪಟ್ಟುಗೊಳಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಿಲ್ಲ. ಇಂಥ ಸುಳ್ಳು ಹೇಳುವ ಪಕ್ಷಕ್ಕೆ ಜನ ಮತ ಹಾಕಬಾರದು ಎಂದು ಸಿಎಂ ಸಿದ್ದರಾಮಯ್ಯ ವಿನಂತಿಸಿದರು.

ಸಂವಿಧಾನದ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯ

0

ದೇಶಾದ್ಯಂತ ಚುನಾವಣಾ ಕಣ ರಂಗೇರಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಹುಮ್ಮಸ್ಸು ಕೂಡಾ ಹುಚ್ಚು ಹಿಡಿಸುವಷ್ಟರ ಮಟ್ಟಿಗೆ ಇದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ `ಪ್ರಜಾಪ್ರಭುತ್ವ’ ಎಂಬುದರ ಅರ್ಥವೇ ತಿಳಿಯದಷ್ಟು ಜನರು ರಾಜಕೀಯವಾಗಿ ಪ್ರಾಭಾವಿತರಾಗಿರುವುದು ಪ್ರಜಾಪ್ರಭುತ್ವಕ್ಕೆ ಆತಂಕಕಾರಿ ವಿಷಯ ಎನಿಸಿದರೂ ತಪ್ಪಾಗಲಿಕ್ಕಿಲ್ಲ. ಜಗತ್ತಿನ ಎಲ್ಲ ದೇಶಗಳ ಇತಿಹಾಸವನ್ನು ಸ್ವಲ್ಪ ಇಣುಕಿದರೂ ಭಾರತ ವಿಶಿಷ್ಠ ಮತ್ತು ವಿಶೇಷ ಎನಿಸಿದೆ. ಸ್ವಾತಂತ್ರ‍್ಯದ ನಂತರ ಭಾರತವು ಸಂವಿಧಾನದ ನಿರ್ದೇಶನದಂತೆ ನಡೆಯುತ್ತಿದೆ.

ಸಮಸ್ತ ಭಾರತೀಯರಿಗೆ ಎಲ್ಲ ಜಾತಿ, ಧರ್ಮ, ಪಂಥಗಳನ್ನು ಮೀರಿ ಸಮಾನ ಅವಕಾಶಗಳನ್ನು ಕಲ್ಪಿಸಿ ಮೂಲಭೂತ ಹಕ್ಕುಗಳನ್ನು ಒದಗಿಸಿ, ಒಬ್ಬ ಪ್ರಜೆಯಾದವನು ಪ್ರಧಾನಿಯನ್ನು ಕೂಡ ಪ್ರಶ್ನಿಸಬಹುದು ಎಂಬ ಶ್ರೇಷ್ಠ ಸಂದೇಶವನ್ನು ಸಾರಿದ ಬಲಿಷ್ಠ ಸಂವಿಧಾನ ನಮ್ಮದು.

ಆದರೆ ನಮ್ಮ ಬಲಿಷ್ಠ ಸಂವಿಧಾನ ರಾಜಕೀಯ ಪಕ್ಷಗಳ, ಅಧಿಕಾರದಾಹಿ ನಾಯಕರ ಕೈಯಲ್ಲಿ ಸಿಕ್ಕು ದಿನ ದಿನಕ್ಕೂ ನಲುಗುತ್ತಿದೆ. ಕೆಲವು ವರ್ಷಗಳಿಂದ ರಾಜಕೀಯ ನಾಯಕರು ಸಂವಿಧಾನ ಬದಲಾವಣೆಯ ಕುರಿತು ನೀಡುವ ಬಹಿರಂಗ ಹೇಳಿಕೆಗಳು ಅಕ್ಷರಶಃ ಪ್ರಜ್ಞಾವಂತ ಭಾರತೀಯರಿಗೆ ಭಯ ಹೆಚ್ಚಿಸಿದ್ದು ಸುಳ್ಳಲ್ಲ.

ಯಾಕೆಂದರೆ ಇಂದು ನಾವು ನೀವೆಲ್ಲರೂ ನಿರ್ಭಯವಾಗಿ ಯಾರ ಹಂಗಿನಲ್ಲಿಯೂ ಇರದೇ ಬದುಕುತ್ತಿದ್ದೇವೆ ಎಂದರೆ ಅದರ ಹಿಂದೆ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳೇ ಕಾರಣ.

ಅಂಥ ಬಲಿಷ್ಠ ಸಂವಿಧಾನವನ್ನೇ ಸಂವಿಧಾನ ಬದ್ಧ ಹುದ್ದೆಯಲ್ಲಿರುವ ನಾಯಕರುಗಳು ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ ಎಂದರೆ ಖಂಡಿತವಾಗಿಯೂ ಪ್ರತೀ ಭಾರತೀಯನೂ ಯೋಚಿಸಿಲೇಬೇಕು. ನಾವು ಎಡವಿದ್ದು ಎಲ್ಲಿ ಎಂಬುದನ್ನು ಅರಿತುಕೊಳ್ಳಲೇಬೇಕು. ಯಾಕೆಂದರೆ ಸಂವಿಧಾನ ಬದಲಾದರೆ ನಾವು ರಾಜಪ್ರಭುತ್ವದಲ್ಲಿ ಬದುಕಬೇಕಾಗಬಹುದು. ರಾಜ ಪ್ರಭುತ್ವ ಎಂಬುದು ಒಂದು ರೀತಿಯ ಸರ್ವಾಧಿಕಾರ.

ಅಲ್ಲಿ ಪ್ರಜೆಗಳ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಗಳು ತಾಂಡವವಾಡುತ್ತವೆ ಎಂಬುದು ಸುಳ್ಳಲ್ಲ.
ಹಾಗಾಗಿ ನಾವು ಆಗು ಹೋಗುಗಳ ಕುರಿತಾಗಿ, ಭವಿಷ್ಯದ ಆಲೋಚನೆಗಳನ್ನು ವಿಮರ್ಶಿಸಿ ಯಾವುದು ಸೂಕ್ತ ಎಂಬುದನ್ನು ಅರಿತು ಮತದಾನ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಚುನಾವಣೆ ವ್ಯಾಪಾರ ಅಲ್ಲ. ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಶ್ರೇಷ್ಠ. ಮತದಾರರಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಅದಕ್ಕಾಗಿ ಯಾರೂ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ. ಎಲ್ಲ ಪ್ರಜೆಗಳು ಮೊದಲು ನಾವು ಏಕೆ ಮತ ಹಾಕಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ನಾವು ಏಕೆ ಮತ ಹಾಕಬೇಕು?: ನಾವು ಏಕೆ ಮತ ಹಾಕಬೇಕು ಮತ್ತು ಮತ ಹಾಕಿದರೆ ನಮಗೆ ಸಿಗುವ ಅನುಕೂಲ ಅನಾನುಕೂಲಗಳು ಏನು? ನನ್ನ ಒಂದು ಮತಕ್ಕೆ ಸಮಾಜವನ್ನು ಬದಲಿಸುವ ಶಕ್ತಿ ಇದೆಯಾ?

ರಾಜಕೀಯ ವ್ಯವಸ್ಥೆ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಏನು? ಹೀಗೆ ಹಲವಾರು ಪ್ರಶ್ನೆಗಳು ಮತದಾರರಲ್ಲಿ ಇವೆ. ಸದೃಢ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಮತದಾರರ ಸಹಭಾಗಿತ್ವ ಅತ್ಯಗತ್ಯ. ಪ್ರತಿಯೊಬ್ಬರೂ ತಪ್ಪದೇ ಮತ ಹಾಕಬೇಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇದರಿಂದ ದೇಶ ಸದೃಢವಾಗುತ್ತದೆ ಎಂಬ ವಿಷಯ ಮತದಾರರು ತಿಳಿದುಕೊಳ್ಳಬೇಕು. ಎಲ್ಲ ಮತದಾರರು ತಮ್ಮ ಮತವನ್ನು ಮಾರಿಕೊಳ್ಳದೇ ವೈಯಕ್ತಿಕ ಹಿತಾಸಕ್ತಿ, ಆಸೆ, ಆಮಿಷಗಳನ್ನು ಬದಿಗಿಟ್ಟು ಸಂವಿಧಾನವನ್ನು ರಕ್ಷಣೆ ಮಾಡುವಂತಹ, ಸಂವಿಧಾನದ ಕುರಿತಾಗಿ ಅಭಿಮಾನವುಳ್ಳ, ಸಂವಿಧಾನದ ಆಶಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುವ ಸೂಕ್ತ ಅಭ್ಯರ್ಥಿಗೆ ನಮ್ಮ ಅಮೂಲ್ಯ ಮತವನ್ನು ನೀಡಬೇಕು. `ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನಾವೇನು ನೀಡಿದ್ದೇವೆ’ ಎಂಬುದು ನಾವು ಚಿಕ್ಕಂದಿನಿಂದಲೂ ಕಲಿತ ಪಾಠ. ಆದರೆ, ನಾವು ನ್ಯಾಯಯುತವಾಗಿ ನೀಡುವ ಒಂದು ಮತ ದೇಶವನ್ನು ರಕ್ಷಿಸಬಲ್ಲದು, ಸಂವಿಧಾನವನ್ನು ಕಾಪಾಡಬಲ್ಲದು, ಪ್ರಜೆಗಳ ಹಿತಾಸಕ್ತಿಯನ್ನು ಅರಿಯಬಲ್ಲದು ಎಂಬುದನ್ನು ಅವಲೋಕಿಸಿ ಚಲಾಯಿಸಿದ ಮತ ಮಾತ್ರ ಭಾರತದ ರಾಜಕಾರಣದ ದಿಕ್ಕನ್ನು ಬದಲಿಸಲು ಸಾದ್ಯ.

ಅಧಿಕಾರ ಎಂಬುದು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಹರಿಯುವ ನೀರಿನಲ್ಲಿರುವ ಪರಿಶುದ್ಧತೆ ನಿಂತ ನೀರಿನಲ್ಲಿರಲು ಸಾಧ್ಯವಿಲ್ಲ. ನಿಂತ ನೀರು ಎಷ್ಟು ಮಲಿನವೋ, ಅಧಿಕಾರ ಏಕ ವ್ಯಕ್ತಿ ಒಡೆತನದಲ್ಲಿರುವುದು ಅಷ್ಟೇ ಮಲೀನವಾದುದು. ಮಲಿನತೆಯನ್ನು ಸಹಿಸಿಕೊಳ್ಳುವ ಮನೋಭಾವ ನಮ್ಮದಾಗಬಾರದು, ಶುದ್ಧತೆಯನ್ನು ಕಾಪಾಡಿಕೊಳ್ಳುವ ಮನಸ್ಥಿತಿ, ಪ್ರಜ್ಞಾವಂತಿಕೆ ನಮ್ಮದಾಗಬೇಕು. ಅದಕ್ಕಾಗಿ ಯಾವುದೇ ಮತದಾರರು ನಿಮ್ಮ ಮತವನ್ನು ಯಾವುದೇ, ಆಸೆ, ಆಮಿಷಗಳಿಗೆ, ಭಾವನಾತ್ಮಕ ವಿಷಯಗಳಿಗೆ ಬಲಿಯಾಗದೆ, ನಮ್ಮ ಸುತ್ತ ಮುತ್ತಲಿನ ಅಭಿವೃದ್ಧಿಯನ್ನು ಪರಿಗಣಿಸಿ, ಅಭಿವೃದ್ಧಿಯ ಕನಸು ಹೊತ್ತಿರುವ, ನಿಮಗೆ ಸೂಕ್ತ ಎನಿಸಿರುವ ಅಭ್ಯರ್ಥಿಗೆ ಸ್ವ ಆಲೋಚನೆಯಿಂದ ಯೋಚಿಸಿ, ಮತವನ್ನು ಮಾರಿಕೊಳ್ಳದೇ ಮತ ಚಲಾಯಿಸಿ. ನಿಮ್ಮ ಒಂದು ಮತಕ್ಕೆ ಸಂವಿಧಾನ ರಕ್ಷಿಸುವ ಶಕ್ತಿಯಿದೆ, ದೇಶದ ಹಿತಾಸಕ್ತಿಯನ್ನು ಕಾಪಾಡುವ ಶಕ್ತಿಯಿದೆ. ಜನರಿಗೆ ಸ್ಪಂದಿಸುವ ನಾಯಕನನ್ನು ನಾಡಿಗೆ ಒದಗಿಸುವ ಶಕ್ತಿಯಿದೆ ಎಂಬುದನ್ನು ಮರೆಯದೆ ಗಮನದಲ್ಲಿಟ್ಟುಕೊಂಡು ಆತ್ಮಾಭಿಮಾನದಿಂದ ಮತವನ್ನು ನೀಡಿ.
– ಪ್ರಶಾಂತ ಮಡಿವಾಳರ, ಶಿರೋಳ.

vote

ಮಂಜುನಾಥನಗರದಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ ಬೆಟಗೇರಿ ಬಳಿಯ ಮಂಜುನಾಥ ನಗರಕ್ಕೆ ಜಿ.ಪಂ ಉಪ ಕಾರ್ಯದರ್ಶಿ ಹಾಗೂ ಸ್ವೀಪ್ ಸಮಿತಿ ಜಿಲ್ಲಾ ನೋಡಲ್ ಅಧಿಕಾರಿ ಸಿ.ಬಿ. ದೇವರಮನಿ ಗುರುವಾರ ಭೇಟಿ ನೀಡಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಿದರು.

ಮಂಜುನಾಥ ನಗರದ ಮನೆ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ಸಂಬಂಧ ಮೇ 7ರಂದು ಮತದಾನ ನಡೆಯಲಿದ್ದು, ತಪ್ಪದೇ ಮತ ಚಲಾಯಿಸುವಂತೆ ಮತದಾರರಲ್ಲಿ ಕೋರಿದರು. ಯಾವುದೇ ಕಾರಣಕ್ಕೂ ಮತದಾನದಿಂದ ಅರ್ಹರು ವಂಚಿತರಾಗಬಾರದು. ಕಡ್ಡಾಯವಾಗಿ ಮತದಾನ ಮಾಡಿ, ಮತದಾನ ಹೆಚ್ಚಳಕ್ಕೆ ಸಹಕರಿಸಬೇಕು ಎಂದು ಸಿ.ಬಿ. ದೇವರಮನಿ ಮನವಿ ಮಾಡಿದರು.

ಮನೆ ಮನೆಗೆ ಸ್ಟಿಕರ್ ಅಂಟಿಸುವ ಮೂಲಕ ಮೇ 7ರಂದು ಮತ ಚಲಾಯಿಸುವಂತೆ ಹಿರಿಯ ನಾಗರಿಕರಲ್ಲಿ ಕೋರಿದರಲ್ಲದೆ, ಪ್ರತಿ ಬಡಾವಣೆಗೂ ಬ್ಯಾನರ್ ಅಳವಡಿಸುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು. ಆ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಮೂಲಕ ಹೆಚ್ಚಿನ ಅರಿವು ಮೂಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಇದೇ ಏಪ್ರಿಲ್ 28ರಂದು ನಡೆಯುವ ‘ನಮ್ಮ ನಡೆ-ಮತಗಟ್ಟೆ ಕಡೆಗೆ’ ಸಂಬಂಧ ಜಾಗೃತಿ ಅಭಯಾನ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನಗರದ ಬಸವೇಶ್ವರ ವೃತ್ತಕ್ಕೆ ತೆರಳಿ ವೀಕ್ಷಿಸಲಾಯಿತು. ಜಾಥಾ ಮಾರ್ಗ ವೀರನಾರಾಯಣ ದೇವಸ್ಥಾನದ ಬಳಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಮುಖ್ಯಾಪಾಧ್ಯಾಯರ ಜೊತೆಗೆ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ಮಳೆಯಿಂದಾಗಿ ಬಳ್ಳಾರಿ ರೈಲ್ವೆ ಅಂಡರ್ ಬ್ರಿಡ್ಜ್ ಚರಂಡಿಗಳಲ್ಲಿ ಕಸ ಕಡ್ಡಿ

ವಿಜಯಸಾಕ್ಷಿ ಸುದ್ದಿ, ಗದಗ : ಕಳೆದ 5 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಗದಗ ನಗರದ ಬಳ್ಳಾರಿ ರೈಲ್ವೆ ಅಂಡರ್ ಬ್ರಿಡ್ಜ್ ಬಳಿಯ ಚರಂಡಿಗಳಲ್ಲಿ ಕಸ ಕಡ್ಡಿ-ತುಂಬಿಕೊಂಡು ಅಲ್ಲಿ ಸಂಚರಿಸಲು ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.

ಇದನ್ನು ಗಮನಿಸಿದ ನಗರಸಭೆ ಅಧಿಕಾರಿ ಎಂ.ಎಂ. ಮಕಾನದಾರ, ಆರೋಗ್ಯ ಹಾಗೂ ಪರಿಸರ ಅಭಿಯಂತರ ಅಧಿಕಾರಿ ಆನಂದ್ ಬದಿ ಅವರ ನಿರ್ದೇಶನದಲ್ಲಿ ನಗರಸಭೆಯ ಪೌರಕಾರ್ಮಿಕರು ಕಸ ಕಡ್ಡಿಗಳನ್ನು ತೆರೆವುಗೊಳಿಸಿದರು.

`ಯುವ ಚೈತನ್ಯ ಸಮಾವೇಶ’ ಏ.28ಕ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ : ಏಪ್ರಿಲ್ 28ರ ಸಂಜೆ 4 ಗಂಟೆಗೆ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ `ಯುವ ಚೈತನ್ಯ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಯುವಕರನ್ನು ರಾಜಕೀಯವಾಗಿ ಜಾಗೃತಗೊಳಿಸುವುದು ಮತ್ತು ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಎಡವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯುವಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವಕರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು `ಯುವನಿಧಿ’ ಯೋಜನೆ ಜಾರಿಗೆ ತಂದಿದ್ದಾರೆ. ಈ ಎಲ್ಲ ಯೋಜನೆಗಳನ್ನು ಯುವಕರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಮುಖಂಡರಾದ ಬಸವರಾಜ ಕಡೆಮನಿ, ಸರ್ಫರಾಜ ಬಬರ್ಚಿ ಇತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಮಾಜಿ ಶಾಸಕ ಡಿ.ಆರ್. ಪಾಟೀಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಇನ್ನಿತರರು ಆಗಮಿಸಲಿದ್ದಾರೆ ಎಂದು ಕೃಷ್ಣಗೌಡ ಪಾಟೀಲ ಮಾಹಿತಿ ನೀಡಿದರು.

ಗುಡುಗು-ಸಿಡಿಲಿನಿಂದ ಎಚ್ಚರ ವಹಿಸಿ : ವೈಶಾಲಿ ಎಂ.ಎಲ್.

0

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಸಂಭವಿಸಬಹುದಾದ ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಕಾಮನ್ ಅಲರ್ಟಿಂಗ್ ಪ್ರೊಟೊಕಾಲ್ (ಕ್ಯಾಪ್) ಮುಖಾಂತರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಸಂದೇಶ ಗಮನಿಸಬೇಕು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು ಸೂಕ್ತ.

ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಸುರಕ್ಷಿತವಾದ ಕಟ್ಟಡಗಳಾದ ಮನೆ, ಕಚೇರಿ, ಅಂಗಡಿ ಮತ್ತು ಕಿಟಕಿ ಮುಚ್ಚಿರುವ ವಾಹನಗಳಲ್ಲಿ ಆಶ್ರಯ ಪಡೆಯುವುದು. ಕೆರೆ ಮತ್ತು ನದಿಗಳು ಹಾಗೂ ಇನ್ನಿತರೆ ನೀರಿನ ಮೂಲಗಳಿಂದ ತಕ್ಷಣವೇ ದೂರವಿರುವುದು.

ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು.

ಗುಡುಗು-ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣ ಮುಂದೂಡುವುದು ಹಾಗೂ ಮನೆಯಲ್ಲೇ ಇರುವುದು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು ಅಗತ್ಯ ಎಂದು ತಿಳಿಸಿದ್ದಾರೆ.

ಮಿಂಚನ್ನು ಆಕರ್ಷಿಸುವಂತಹ ವಿದ್ಯುತ್, ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯುವುದು. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಬಾರದು ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿಯನ್ನು ಬಳಸಬಾರದು.

ಮಕ್ಕಳು, ವಯೋವೃದ್ಧರು, ಜಾನುವಾರುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು. ಸಿಡಿಲಿನ ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಈ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಒಗೆಯಬಾರದು.

ದೋಣಿ ವಿಹಾರ ಅಥವಾ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು. ಅರಣ್ಯ ಪ್ರದೇಶದಿಂದ ಗಿಡ-ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು. ಮಿಂಚಿನ ಹೊಡೆತದಿಂದಾಗಿ ಕಾಡ್ತಿಚ್ಚು ಸಂಭವಿಸುವ ಸಾಧ್ಯತೆಯಿದೆ. ಗುಡುಗು ಸಿಡಿಲಿನ ಸಮಯದಲ್ಲಿ ಬಯಲು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ, ತಕ್ಷಣವೇ ಹತ್ತಿರದಲ್ಲೇ ಇರುವ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗುವುದು.

ಮಿಂಚು ಬರುವ ಸಮಯದಲ್ಲಿ ರಬ್ಬರ್ ಸೋಲ್ ಇರುವ ಪಾದರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರವಿರುವುದು. ವಿದ್ಯುತ್ ಸಂಪರ್ಕ ಹೊಂದಿರುವ ಕಂಪ್ಯೂಟರ್, ವಿಡಿಯೋ ಗೇಮ್ ಸಾಧನಗಳು, ಮೊಬೈಲ್ ಫೋನ್, ವಾಷಿಂಗ್ ಮಷಿನ್, ಸೈನ್ ಹಾಗೂ ಇತರ ವಿದ್ಯುತ್ ಉಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು.

ಆಘಾತಕ್ಕೊಳಗಾದ ವ್ಯಕ್ತಿಯಲ್ಲಿ ಉಸಿರಾಟವು ಕಂಡುಬರದಿದ್ದಲ್ಲಿ, ತಕ್ಷಣವೇ ಕೃತಕ ಉಸಿರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ವ್ಯಕ್ತಿಯಲ್ಲಿ ಎದೆಬಡಿತವು ಕಂಡು ಬರದಿದ್ದಲ್ಲಿ ತಕ್ಷಣವೇ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಕಣ್ಣಿನ ದೃಷ್ಟಿ, ಕಿವಿ ಕೇಳಿಸುವಿಕೆ ಹಾಗೂ ಮೂಳೆಗಳ ಮುರಿದಿವೆಯೇ ಎಂದು ಪರೀಕ್ಷಿಸಬೇಕು. ಇದರಿಂದ ಪಾರ್ಶ್ವವಾಯು/ಲಕ್ವಾ ಹೊಡೆಯುವುದನ್ನು ಮತ್ತು ಅಧಿಕ ರಕ್ತಸ್ರಾವದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಬಹುದು.

ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯು ವಿವಿಧ ರೀತಿಯ ಸುಟ್ಟ ಗಾಯಗಳಿಂದ ಬಳಲಬಹುದು ಹಾಗೂ ಕಾಣದ ಗಾಯಗಳು/ಅಘಾತಕ್ಕೆ ಒಳಗಾಗಿರಬಹುದು. ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳಿದ್ದಲ್ಲಿ ಸೂಕ್ತ ಚಿಕಿತ್ಸೆಗಾಗಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕಳುಹಿಸಬೇಕು. ಸಿಡಿಲು ಬಡಿದಿರುವ ವ್ಯಕ್ತಿಯಿರುವ ಸ್ಥಳಕ್ಕೆ ತಲುಪಲು ಹಾಗೂ ಸಿಡಿಲು ಬಡಿತಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು ಮತ್ತು ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಡಿಲು/ಮಿಂಚು ಬಡಿದ ಸಮಯದಲ್ಲಿ ಪ್ರಾಥಮಿಕವಾಗಿ 112/108 ಸಹಾಯವಾಣಿಗೆ ಕರೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿಯು ಆಗಮಿಸುವ ಮುನ್ನವೇ ಅಗತ್ಯ ಪ್ರಥಮ ಚಿಕಿತ್ಸೆಯಿಂದ ಸಿಡಿಲು/ಮಿಂಚಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವನ್ನು ಉಳಿಸಬಹುದಾಗಿದೆ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ಮುಟ್ಟಿ ಉಪಚರಿಸುವದರಿಂದ ಯಾವುದೇ ಅಪಾಯವಿರುವುದಿಲ್ಲ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಉಸಿರಾಟ ಹಾಗೂ ಎದೆ ಬಡಿತವನ್ನು ಪರೀಕ್ಷಿಸಬೇಕು. ವ್ಯಕ್ತಿಯ ದವಡೆಗೆ ನೇರವಾಗಿ ಕುತ್ತಿಗೆಯಲ್ಲಿರುವ ರಕ್ತನಾಳವನ್ನು ಪರೀಕ್ಷಿಸುವುದರಿಂದ ಸುಲಭವಾಗಿ ನಾಡಿ ಮಿಡಿತವನ್ನು ತಿಳಿಯಬಹುದು.

ಮುಳಗುಂದ ಪಟ್ಟಣದ ಅಲ್ಲಮ ಪ್ರಭುಸ್ವಾಮಿ ಜಾತ್ರಾ ಮಹೋತ್ಸವ

0

ಮುಳಗುಂದ ಪಟ್ಟಣದ ಅಲ್ಲಮ ಪ್ರಭುಸ್ವಾಮಿ ಜಾತ್ರಾ ಮಹೋತ್ಸವ ಸಕಲ ವಾದ್ಯ ಮೇಳಗಳೊಂದಿಗೆ ನೆರವೇರಿತು. ಅಲ್ಲಮ ಪ್ರಭುವಿನ ಪ್ರಭಾವಳಿ ಉತ್ಸವ, ಸಂಭ್ರಮದ ಕಡುಬಿನ ಕಾಳಗವನ್ನು ಸಿದ್ದರಾಮಯ್ಯ ಹಿರೇಮಠ ನೆರೆವೇರಿಸಿದರು.

error: Content is protected !!