ಮಂಡ್ಯ: ಇತ್ತೀಚೆಗೆ ಮಂಡ್ಯದಲ್ಲಿ ಮೃತಪಟ್ಟ ಭಿಕ್ಷುಕಿಯೊಬ್ಬರ ಮನೆಯಲ್ಲಿ ₹8.40 ಲಕ್ಷ ಹಣ ಪತ್ತೆಯಾದ ಘಟನೆ ಬೆನ್ನಲ್ಲೇ, ಇದೀಗ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಬರೋಬ್ಬರಿ ₹3.5 ಲಕ್ಷ ಹಣ ಪತ್ತೆಯಾಗಿದೆ.
ಶ್ರೀರಂಗಪಟ್ಟಣದ ನಿವಾಸಿ ಸಾವಿತ್ರಮ್ಮ ಹೊಟ್ಟೆಪಾಡಿಗಾಗಿ ಭಿಕ್ಷಾಟನೆ ಮಾಡುತ್ತಿದ್ದು, ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದ ತಂಡ ಸಾವಿತ್ರಮ್ಮನಿಗೆ ಸ್ನಾನ ಮಾಡಿಸಿ ಆರೈಕೆ ಮಾಡಿದೆ. ಬಳಿಕ ಆಕೆಯ ಮನೆಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಚೀಲವೊಂದರಲ್ಲಿ ನಾಣ್ಯಗಳು ಹಾಗೂ ₹10, ₹20 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
ಹಣವನ್ನು ಪ್ರತ್ಯೇಕವಾಗಿ ಎಣಿಕೆ ಮಾಡಿದಾಗ ಒಟ್ಟು ₹3.5 ಲಕ್ಷ ಇರುವುದು ಬೆಳಕಿಗೆ ಬಂದಿದೆ. ಸಾವಿತ್ರಮ್ಮ ಹಲವು ವರ್ಷಗಳಿಂದ ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿಕೊಂಡಿದ್ದರು ಎನ್ನಲಾಗಿದೆ.
ಕೆಲವು ತಿಂಗಳ ಹಿಂದಷ್ಟೇ ಸಾವಿತ್ರಮ್ಮ ಅವರ ತಾಯಿ ಮೃತಪಟ್ಟಿದ್ದರು. ತಾಯಿಯೊಂದಿಗೆ ಸೇರಿಕೊಂಡೇ ಸಾವಿತ್ರಮ್ಮ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಇದೀಗ ಸಾವಿತ್ರಮ್ಮ ಕೂಡ ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ತಂಡ ಆಕೆಯ ಆರೈಕೆಗೆ ಮುಂದಾಗಿದೆ.
ಇದೇ ವೇಳೆ, ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ಇತ್ತೀಚೆಗೆ ಮೃತಪಟ್ಟ ಭಿಕ್ಷುಕಿ ನೂರ್ ಉನ್ನೀಸ್ ಅವರ ಮನೆಯಲ್ಲಿ ₹8.40 ಲಕ್ಷ ಹಣ ಪತ್ತೆಯಾಗಿತ್ತು. ಸಹೋದರಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ನೂರ್, ಸಹೋದರಿ ಮೃತಪಟ್ಟ ಬಳಿಕ ಒಬ್ಬರೇ ವಾಸಿಸುತ್ತಿದ್ದು ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದರು.
ಜೀವಂತವಾಗಿದ್ದಾಗ ಆಕೆಯ ಆರೈಕೆಗೆ ಯಾರೂ ಮುಂದಾಗಲಿಲ್ಲ. ಆದರೆ ಮೃತಪಟ್ಟ ಬಳಿಕ ಆಕೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ₹3.5 ಲಕ್ಷ ಪತ್ತೆಯಾಗಿರುವುದು ಗಮನ ಸೆಳೆದಿದೆ.



